Tuesday, July 10, 2012

ಬೆದರುಗೊಂಬೆ ನಿಲ್ಲಿಸುವುದೇ ಭ್ರಮೆ ಹುಟ್ಟಿಸಲು








 ಕೆಲವರ್ಷಗಳ ಹಿಂದೆ "ಹಿಂದೂ ಭಯೋತ್ಪಾದನೆ"ಎಂಬ ಹುಯಿಲಿನ ಸಮಯದಲ್ಲಿ  ಬಂತನಾಗಿದ್ದ ಲೆ. ಕ. ಪುರೋಹಿತ್ ಎಂಬ ಸೈನ್ಯಾಧಿಕಾರಿಯೊಂದಿಗೆ   ದೇಶದ ಖ್ಯಾತ ಪತ್ರಿಕೆಯೊಂದು ಸಂದರ್ಶನ ನಡೆಸಿತ್ತು.
ನಿಮ್ಮ ಸಿದ್ಧಾಂತಗಳಿಗೆ ನೀವು ಇನ್ನೂ ಬದ್ದರಾಗಿಯೇ ಇದ್ದೀರಾ?
ನೀವು ಯಾವ ಸಿದ್ಧಾಂತದ ಬಗ್ಗೆ ಕೇಳುತ್ತಿದ್ದೀರಿ?
ಅದೇ ನಿಮ್ಮ ಬಲಪಂಥೀಯ ವಾದ -ಸಿದ್ದಾಂತಗಳು?
ನಾನೊಬ್ಬ ಸೈನ್ಯದ ವ್ಯಕ್ತಿಯಾಗಿ ಇಂಥ ಜಾಣತನದ ಪ್ರಶ್ನೆಗಳಿಗೆ ಉತ್ತರಿಸಲಾರೆ.
ಅಭಿನವ ಭಾರತ ಸಂಘಟನೆಯ ಬಗ್ಗೆ ಸ್ವಲ್ಪ ವಿವರಿಸುವಿರಾ?
ಅಭಿನವ ಭಾರತದೊಳಗೆ ನಾನು ಬೇಹುಗಾರನಾಗಿ ಸೇರಿಕೊಂಡೆ. ಅಲ್ಲಿ ನನ್ನ ಕೆಲಸವನ್ನು ನಾನು ಯಶಸ್ವಿಯಾಗಿ ಮಾಡಿ ಮುಗಿಸಿದ್ದೇನೆ. ಕೆಲಸದ ವರದಿಯನ್ನು ನಾನು ನನ್ನ ಯಜಮಾನರಿಗೆ ಕೊಟ್ಟಿದ್ದೇನೆ.ಎಲ್ಲಾ ದಾಖಲೆಗಳನ್ನು ಒಪ್ಪಿಸಿದ್ದೇನೆ. ಸತ್ಯ ಯಾರಿಗೆ ತಿಳಿಯಬೇಕಿತ್ತೋ ಅದು ಅವರಿಗೆ ತಿಳಿದಿದೆ. 
ಪ್ರಕರಣದಲ್ಲಿ  ನಿಮ್ಮೊಂದಿಗೆ ಅಪಾದಿತರಾಗಿದ್ದ ಸುಧಾಕರ ಚತುರ್ವೇದಿಯವರಿಗೆ ನಿಮ್ಮ  ಪ್ರಶ್ನೆಗಳೇನಿದೆ?
ಇವನ್ನೆಲ್ಲಾ ಅದಾಗಲೇ ಸೈನ್ಯದ ವಿಚಾರಣಾ ನ್ಯಾಯಾಲಯದ ಮುಂದಿಟ್ಟಿದ್ದೇನೆ.
ಆದರೆ ಅಭಿನವ ಭಾರತ ಅಪ್ಪಟ ಬಲಪಂಥೀಯ ಸಂಘಟನೆಯಾಗಿದೆ. ಮಾಲೇಗಾಂವ್ ಸ್ಪೋಟದಲ್ಲಿ  ಅದರ ಮೇಲೆ ಅಪಾದನೆಗಳಿವೆ..?
ಯಾವುದೇ ವಾದ ಸಿದ್ಧಾಂತಗಳು ನನ್ನನ್ನು ಭಯೋತ್ಪಾದಕನನ್ನಾಗಿ ಮಾಡಲು ಸಾಧ್ಯವಿಲ್ಲ. ನನ್ನ ಶತ್ರು ಕೂಡಾ ಸಂದೇಹ ಪಡದ ರೀತಿಯಲ್ಲಿ ನಾನು ನನ್ನ ಕೆಲಸವನ್ನು ಮಾಡಿದ್ದೇನೆ.  ಅಭಿನವ ಭಾರತದ  ಮೇಲಿನ ಆಪಾದನೆಗಳು ಇನ್ನೂ ನ್ಯಾಯಾಲಯದ ಮೆಟ್ಟಿಲಲ್ಲಿದೆ.
ಯಾವುದಾದರೂ ಸಂದರ್ಭದಲ್ಲಿ ನೀವು  ನಿಮ್ಮಂತೆ ಆಪಾದಿತರಾಗಿರುವ ದಯಾನಂದ ಪಾಂಡೆ, ಸಮೀರ್ ಕುಲಕರ್ಣಿ ಅಥವಾ ಅಜಯ್ ರಾಹಿರ್‌ಕರ್  ಮುಂತಾದವರೊಂದಿಗೆ ಚರ್ಚೆ ನಡೆಸಿದ್ದಿದೆಯೇ?
ರಾಹಿರ್ ಕರ್ ನನ್ನ ಬಾಲ್ಯದ ಗೆಳೆಯ. ಇನ್ನುಳಿದ ಸಂಗತಿಗಳ ಬಗ್ಗೆ ನಾನೇನನ್ನೂ ಹೇಳುವುದಿಲ್ಲ.
ನಿಮ್ಮ ಮತ್ತು ದಯಾನಂದ ಪಾಂಡೆ ಇಬ್ಬರ ಮಧ್ಯೆಸ್ಪೋಟದ ಬಗ್ಗೆ ಮತ್ತು ಉಗ್ರ ಹಿಂದೂ ರಾಷ್ಟ್ರದ ಬಗ್ಗೆ ಟೆಲಿಫೋನ್ ಸಂಭಾಷಣೆ ನಡೆದಿತ್ತು. ಅದನ್ನು ನೀವು ನಿರಾಕರಿಸುತ್ತೀರಾ?
ನಾನ್ಯಾಕೆ ನಿರಾಕರಿಸಲಿ? ಯಾರು ನಿರಾಕರಿಸುತ್ತಿದ್ದಾರೆ? ಒಬ್ಬ ಬೇಹುಗಾರಿಕಾ ಅಕಾರಿಯಾಗಿ, ಒಬ್ಬ ನಾಗರಿಕನಾಗಿ ನಾನು ಜನರೊಂದಿಗೆ ಮಾತಾಡಬಾರದೇ? ಯಾರಿಗೂ ಯಾರೊಂದಿಗೂ ಮಾತಾಡಬಾರದೆನ್ನಲು ಸಾಧ್ಯವಿಲ್ಲ. ನೀವು ನಿಜವಾದ ಸಂಗತಿಯನ್ನು ತಿಳಿದುಕೊಳ್ಳಬೇಕು. ಹೀಗೆ ಸತ್ಯವನ್ನು ತಿಳಿಯದೆ ಮಾತಾಡುವವರಿಂದ ನಾನು ಮೂರೂವರೆ ವರ್ಷ ಸರಳುಗಳ ಹಿಂದೆ ಕಳೆಯುವಂತಾಯಿತು. ಇವತ್ತು ನನಗೆ ಬಂದ ಸ್ಥಿತಿ ನಾಳೆ ಇನ್ನೊಬ್ಬ ಬೇಹುಗಾರ ಅಕಾರಿಗೆ ಬರಬಹುದು.
ನೀವು ವಹಿಸಿಕೊಂಡ ಕಾರ್ಯಕ್ಕೂ ಮಾಲೇಗಾಂವ್ ಸ್ಪೋಟದಲ್ಲಿ ಆಪಾದಿತರೆನ್ನಲಾದವರು ಭಾಗವಹಿದ್ದ ಫರಿದಾಭಾದ್, ಕೊಲ್ಕತ್ತಾ ಮತ್ತು ಭೂಪಾಲ್ ನ ಧಾರ್ಮಿಕ ಸಭೆಗಳಿಗೂ ಏನು ಸಂಬಂಧ?
ಇದರ ಬಗೆಗಿನ ವರದಿಗಳನ್ನು ನಾನು ನನ್ನ ವರಿಷ್ಠರಿಗೆ ತಲುಪಿಸಿದ್ದೇನೆ. ಇದು ಅಧಿಕೃತ ದಾಖಲೆ. ಅದರ ಬಗ್ಗೆ ನಾನೇನೂ ಹೇಳಬಾರದು. ಆರೋಪ ಪಟ್ಟಿಯಲ್ಲಿ ಹೇಳಿರುವಂತೆ ಆ ಮೂರು ಸಭೆಗಳಿಗೂ ಸ್ಪೋಟಕ್ಕೂ ಏನೇನೂ ಸಂಬಂಧವಿಲ್ಲ. ಅದು ಅಂತಿಮ ಸತ್ಯವಲ್ಲ. 
ಹಲವು ನೇರಾ ನೇರದ ಪ್ರಶ್ನೆಗಳ ತರುವಾಯ ಇನ್ನೂ ಹಲವು ಪ್ರಶ್ನೆಗಳು ಉಳಿದಿದ್ದವು.
ಈ ಸಂದರ್ಶನದ ಹಿಂದಿನ ಪೂರ್ವರಂಗವನ್ನು ತಿಳಿಯದೆ ಸಂದರ್ಶನ ಸಂಪೂರ್ಣವಾಗದು.
೨೦೦೮ರ ಸೆಪ್ಟಂಬರ್ ೨೯ರಂದು ಮುಂಬೈನಿಂದ ೨೭೦ ಕಿ.ಮೀ ದೂರವಿರುವ ಮಾಲೇಗಾಂವ್ ಎಂಬಲ್ಲಿನ ರಮ್ಜಾನ್ ದರ್ಗಾ ಎಂಬಲ್ಲಿ ಪ್ರಬಲ ಬಾಂಬೊಂದು ಸ್ಪೋಟವಾಗಿತ್ತು. ಅದರಲ್ಲಿ ೭ಜನರು ಮೃತಪಟ್ಟಿದ್ದರು. ಸ್ಪೋಟದ ತರುವಾಯ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಸಂದೇಹಿಸಿದ್ದ ಮಹಾರಾಷ್ಟ್ರ ATS (Anty terrism squad) ಇದ್ದಕ್ಕಿದ್ದಂತೆ  ಇದು ಹಿಂದೂ ಸಂಘಟನೆಗಳ ಕೃತ್ಯ ಎಂದು ಸಂಶಯ ವ್ಯಕ್ತಪಡಿಸಿತ್ತು. ಅದರಲ್ಲೂ ಮುಖ್ಯವಾಗಿ "ಅಭಿನವ ಭಾರತ"ಎಂಬ ಸಂಘಟನೆಯದ್ದೇ ಕೃತ್ಯ ಎಂದು ಮಸಾಲೆ ಅರೆದಿತ್ತು. ಈ ಹಿನ್ನಲೆಯಲ್ಲಿ ೨೦೦೯ ರ ಜನವರಿಯಲ್ಲಿ ATS "ಪ್ರತ್ಯೇಕ ಹಿಂದೂ ರಾಷ್ಟ್ರ ಮತ್ತು ಹಿಂದೂ ಸಂವಿಧಾನವನ್ನು ಹೊಂದಿರುವ" ೧೪ ಜನರ ಮೇಲೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿತ್ತು. ಅದರಲ್ಲಿ ಭಾರತೀಯ ಸೈನ್ಯದ ಲೆ.ಕ. ಪ್ರಸಾದ್ ಶ್ರೀಕಾಂತ್ ಪುರೋಹಿತ್ ಎಂಬ ವ್ಯಕ್ತಿಯೂ ಸೇರಿದ್ದರು. ಸ್ಪೋಟದ ಹೊತ್ತಲ್ಲಿ ಪುರೋಹಿತ್ ಮಧ್ಯಪ್ರದೇಶದ ಸೈನಿಕ ಶಾಲೆಯಲ್ಲಿ  ಅರೆಬಿಕ್ ಕಲಿಯುತ್ತಿದ್ದರು ಎಂದೂ ದಯಾನಂದ್ ಪಾಂಡೆ ಎಂಬುವವರೊಂದಿಗೆ ಈ ಪುರೋಹಿತ್ ಫರಿದಾಭಾದ್, ಕೊಲ್ಕೊತ್ತಾ ಮತ್ತು ಭೂಪಾಲ್‌ಗಳಲ್ಲಿ ನಡೆದ "ಭಯೋತ್ಪಾದಕರ" ಸಭೆಗಳಲ್ಲಿ ಭಾಗವಹಿಸಿದ್ದರು  ಎಂದೂ ಸಾಕ್ಷಿಗಳನ್ನು  ಸೃಷ್ಟಿಸಲಾಯಿತು ಮತ್ತು ಮಾಲೇಗಾಂವ್ ಸ್ಪೋಟದ ಅಂತಿಮ ರೂಪು ರೇಖೆಗಳು ಇಲ್ಲೇ ಸಿದ್ಧವಾದವು ಎಂದು ಬಿಂಬಿಸಲಾಯಿತು. ಮಾಧ್ಯಮಗಳೂ ಕೂಡಾ ಅದನ್ನೇ ಬೊಬ್ಬೆ ಹೊಡೆದವು. ಅಲ್ಲದೆ ಇವರಿಬ್ಬರು ಭಾಗವಹಿಸಿದ್ದ ಉಗ್ರ ಹಿಂದುತ್ವದ ಸಭೆಯಲ್ಲಿ ಸ್ವಾಮಿ ಅಸೀಮಾನಂದರು, ಸಾದ್ವಿ ಪ್ರಜ್ಞಾಸಿಂಗ್ ಮತ್ತು ಒಬ್ಬರು ಶಂಕರಾಚಾರ್ಯರೂ ಭಾಗವಹಿಸಿದ್ದರು ಎಂದೂ ಪ್ರಚಾರ ಮಾಡಲಾಯಿತು.
ಇಷ್ಟು ನಡೆದ ಮೇಲೆ ದಿಗ್ವಿಜಯ ಸಿಂಗರಂಥವರು  "ಕೇಸರಿ ಭಯೋತ್ಪಾದನೆ" ಎನ್ನಲಾರಂಭಿಸಿದರು. ರಾಷ್ಟ್ರವಾದಕ್ಕೆ ಭಯೋತ್ಪಾದನೆಯ ಕೊಂಡಿ ಬೆಸೆಯಲು ಬರ್ಖಾ ದತ್ ರಂಥವರು ಲಿಪ್ಸ್ ಸ್ಟಿಕ್ ಮೆತ್ತಿಕೊಂಡು ಶೋಕಿಯ ಕಾರ್ಯಕ್ರಮಗಳನ್ನು ಎಡೆಬಿಡದೆ ನಡೆಸಿಯೇ ಬಿಟ್ಟರು. "ಹಿಂದುತ್ವದಿಂದ ರಾಷ್ಟ್ರದ ಅಧಃಪತನ" ಎಂಬ ವಿಷಯದಲ್ಲಿ ಚರ್ಚೆ ನಡೆಸಲು ಸುಪ್ರಿಂ ಕೋರ್ಟಿನಲ್ಲಿ ಕೆಲಸವಿಲ್ಲದೆ ಆಕಳಿಸುತ್ತಲೇ ಕಾಲಕಳೆಯುವ ಜನರು ಕೋಟನ್ನು ಇಸ್ತ್ರಿ ಮಾಡಿಸಿಕೊಂಡು ಬಂದರು. ಇನ್ನು ಕೆಲವರಿಗೆ ಲೇಖನಕ್ಕೆ ವಿಷಯಗಳೂ ಭಾಷಣಕ್ಕೆ ಸಾಲುಗಳೂ ಯತೇಚ್ಛ ಸಿಕ್ಕವು.
ಆದರೆ ಕೆಲವು ದಿನಗಳ ಹಿಂದೆ ಭಾರತೀಯ  ಸೈನ್ಯದ ವಿಚಾರಣಾ ನ್ಯಾಯಾಲಯ COI(court of inquiry) ಕರ್ನಲ್ ಪುರೋಹಿತ್ ಅವರನ್ನು ದೋಷಮುಕ್ತ ಎಂದಾಗ ಮತ್ತು ಪುರೋಹಿತ್ ಮೇಲಿನ ಸಂದರ್ಶನವನ್ನು ನೀಡಿದಾಗ ಅಂದು ಬೊಬ್ಬೆ ಹೊಡೆದ ಯಾವ ಮಾಧ್ಯಮಗಳಿಗೂ ಬಾಯಿಯೇ ಬರಲಿಲ್ಲ. ಪುರೋಹಿತರ ಪರವಾಗಿ  ೬೦ ಸಾಕ್ಷಿಗಳು ಇದ್ದಾಗಲೂ ಕಾಣಿಸಲಿಲ್ಲ. ಏಕೆಂದರೆ ಕರ್ನಲ್ ಪುರೋಹಿತ್ ಸ್ಪಷ್ಟವಾಗಿ "ನನಗೆ ಏನು ಸೂಚನೆಯಿತ್ತೋ ಅದನ್ನು ಮಾಡಿದ್ದೇನೆ. ನನ್ನ ಬಾಸ್  ಅವರ ಅಣತಿಯಂತೆ ಎಲ್ಲವನ್ನೂ ಮಾಡಿದ್ದೇನೆ, ಮುಗಿಸಿದ್ದೇನೆ" ಎಂದು ಹೇಳಿದ್ದರು. ಸೈನ್ಯದ ವಿಚಾರಣೆಯೇನೋ ಮುಗಿದಿರಬಹುದು. ಇನ್ನು ನ್ಯಾಯಾಲಯದ ತನಿಖೆ ನಡೆಯಬಹುದು. ಆದರೆ ಅಸಲು ಪ್ರಶ್ನೆಗಳು ಆರಂಭವಾಗುವುದೇ ಇಲ್ಲಿಂದ. ಬೇಹುಗಾರನನ್ನು ಹಿಂದೂ ಸಂಘಟನೆಯೊಳಗೆ ಕಳುಹಿಸಿದ ಉದ್ದೇಶವಾದರೂ ಏನು? ಪುರೋಹಿತರನ್ನು ಕಳುಹಿಸಿದ ಬಾಸ್ ಯಾರು? ಅವರ ಮೇಲೆ ಯಾವ ಜವಾಬ್ದಾರಿಯಿತ್ತು? ಸ್ಪೋಟದ ತರುವಾಯ ಪುರೋಹಿತರ ಕೈವಾಡ ಇದೆ ಎಂದು ಸಂಶಯ ಬಂದಿದ್ದರೂ ಏಕೆ ಸೈನ್ಯ ಮಧ್ಯ ಪ್ರವೇಶಿಸಲಿಲ್ಲ? ಈತ ಬೇಹುಗಾರನೇ ಆಗಿದ್ದರೆ ಸ್ಪೋಟ ನಡೆಯಿತು ಹೇಗೆ? ತಪ್ಪಿಸಲಾಗಲಿಲ್ಲವೇಕೆ? ಪುರೋಹಿತರನ್ನು ATSಗೆ ಒಪ್ಪಿಸುವುದಕ್ಕೂ ಮೊದಲು ಏಕೆ COI ಅವರ ವಿಚಾರಣೆ ನಡೆಸಲಿಲ್ಲ? ಪ್ರಕರಣ ನಡೆದು ಮೂರ್ನಾಲ್ಕು ವರ್ಷಗಳಾದರೂ ಪುರೋಹಿತರನ್ನು ಸೇವೆಯಿಂದ ಏಕೆ ವಜಾ ಗೊಳಿಸಲಿಲ್ಲ?  COI ಯ ವಿಚಾರಣೆಯ ತರುವಾಯ ಪುರೋಹಿತ್  " ಇಂದು ನನಗೆ ನಾಳೆ ಮತ್ತೊಬ್ಬರಿಗೆ ಈ ಗತಿ ಬರಬಹುದು" ಎಂದು ಏಕೆ ಹೇಳಿದರು?
ಈ ಪ್ರಶ್ನೆಗಳಿಗೆ ಬಹುಶಃ ಯಾರೂ ಉತ್ತರ ಹುಡುಕಲು ಹೋಗಲಾರರು. ಏಕೆಂದರೆ  ಅದು ಜಾತ್ಯತೀತತೆಗೆ ಧಕ್ಕೆ ಎಂಬ ಭಾವನೆಯಿರಬಹುದು. ಭಯೋತ್ಪಾದಕರೆಲ್ಲರೂ ಮುಸಲ್ಮಾನರೇ ಎಂಬ ತತ್ತ್ವವನ್ನು ಅಳಿಸಲು ಸಜ್ಜಾಗಿರುವವರು ಸತ್ಯವನ್ನು ಶೋಧಿಸಲು ಹೋಗಲಾರರು. ಕ. ಪುರೋಹಿತ್ ಅವರನ್ನು ಬಲಿಪಶು ಮಾಡಿ, ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಿದ  ಘಟನೆಯನ್ನು ತಡಕಾಡಿದರೆ ಮತ್ತಷ್ಟು ಸತ್ಯಗಳು ಹೊರಬೀಳುತ್ತದೆ.
ಕರ್ನಲ್ ಪುರೋಹಿತ್ ಸಂದರ್ಶನದಲ್ಲಿ " ಆ ಸಭೆಯಲ್ಲಿ ಮಾಲೇಗಾಂವ್ ನ ಬಗ್ಗೆ ಚರ್ಚೆಯೇ ನಡೆದಿಲ್ಲ" ಎಂದು ಹೇಳಿದ್ದರು. ಆದರೆ ATSಇದೇ ಸಭೆಯಲ್ಲಿ ಸ್ಪೋಟದ ಬಗೆ  ತೀರ್ಮಾನಗಳಾದವು ಎಂದು ಪ್ರತಿಪಾದಿಸುತ್ತದೆ. ಇದೇ ಸಭೆಯಲ್ಲಿ  ದಯಾನಂದ ಪಾಂಡೆ " ಸರಿಯಾಗಿ ನಮಾಜಿನ ಸಮಯಕ್ಕೆ ಸ್ಪೋಟವಾಗಬೇಕು" ಎಂದು ಪುರೋಹಿತರೊಂದಿಗೆ ಫೋನಿನಲ್ಲಿ ಸಂಭಾಷಣೆ ನಡೆಸಿದ್ದನೆಂದೂ ಮತ್ತು ಆತ "ಶಾರದಾಪೀಠ" ಎಂಬ ಹೆಸರಿನ ಜಿ ಮೈಲ್ ಮತ್ತು  ಯಾಹೂ ಮೈಲ್ ಗಳಿಂದ ಕಳುಹಿಸಿದ ಪತ್ರಗಳಲ್ಲಿ ಸ್ವಾಧ್ವಿ ಪ್ರಜ್ನಾ ಸಿಂಗ್ ಅವರನ್ನು ಅಭಿನಂದಿಸಿ, ಹಿಂದೂ ರಾಷ್ಟ್ರಕ್ಕಾಗಿ ಮಾಲೇಗಾಂವ್ ಸರಣಿ ಮುಂದುವರಿಯುವುದು ಎಂಬ ವಾಕ್ಯಗಳಿರುವುದಾಗಿ ATS  ಸಾಕ್ಷಿಗಳನ್ನು ಕಲೆಹಾಕಿತು. ಬಾಂಬು ಹಾಕುವವರು ಇಷ್ಟೊಂದು ಮುಠ್ಠಾಳರಾಗಿರುತ್ತಾರಾ ಎಂಬ ಸಂಶಯ ಇದುವರೆಗೆ ದೊಡ್ಡವರಿಗೆ ಬಂದಿಲ್ಲ. ಅದೇ ಮೈಲ್ ಮುಂದುವರಿದು" ಎಲ್ಲಾ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳನ್ನು  ಮುಗಿಸಬೇಕು. ಅವರೆಲ್ಲರೂ ಹಿಂದುಗಳ ಶತ್ರುಗಳು " ಎಂದು ಸಾಗುತ್ತದೆ. ಇಲ್ಲಿ ಯಹೂದಿಗಳನ್ನು ತಂದಾಗಲೇ ಸತ್ಯ ಏನು ಎಂಬುದು ಅರ್ಥವಾಗಬೇಕಿತ್ತು. ಮತ್ತು ಯಾವ ಹಿಂದುವೂ ತನ್ನದಲ್ಲದರ ಬಗ್ಗೆ ಇಷ್ಟೊಂದು ಅಸಹನೆಯನ್ನು ಹೊಂದಿರುವುದನ್ನು ಇದುವರೆಗೆ ಕಂಡಿಲ್ಲ. ಒಂದು ವೇಳೆ ಅಂಥ ಅಸಹನೆ ಇದ್ದಿದ್ದೇ ಆದರೆ ಬಾಂಬುಗಳು ಊರೂರಲ್ಲೂ ಸಿಡಿದುಬಿಡುತ್ತಿದ್ದವು. ಇದರ ಜೊತೆಗೆ ದಯಾನಂದ ಪಾಂಡೆಯ ಲ್ಯಾಪ್‌ಟಾಪಿನಲ್ಲಿ ಮೂರು ಜಿ.ಬಿ ಯಷ್ಟು   ಬ್ಲೂಫಿಲ್ಮ್‌ಗಳಿದ್ದವು ಎಂದು ಕೂಡಾ ATS ಅಪಾದನೆ ಹೊರಿಸಿತು.
ಇವನ್ನೆಲ್ಲಾ ನೋಡಿದಾಗ  ಹಿಂದೂ ಭಯೋತ್ಪಾದನೆಯನ್ನು ಹುಟ್ಟಿಸಲು ತೆರೆಮರೆಯಲ್ಲಿ ಸಾಕಷ್ಟು ಟೇಬಲ್ ವರ್ಕ್‌ಗಳು ನಡೆದಿವೆ ಎಂಬುದು ಸ್ಪಷ್ಟವಾಗುತ್ತದೆ. ಒಂದೆಡೆ ಕ. ಪುರೋಹಿತ್ ನನ್ನು ಬಳಸಿಕೊಂಡು ಆತನನ್ನೂ ಸಿಕ್ಕಿಸುವ ತಂತ್ರ, ಇನ್ನೊಂದೆಡೆ ತಮ್ಮ ಪಾಡಿಗೆ ಪ್ರವಚನ ನೀಡುತ್ತಾ ಇರುತ್ತಿದ್ದ ಸಂತರನ್ನು ಜೈಲಿಗಟ್ಟಿ ಅವರ ಚಾರಿತ್ರ್ಯ ಹನನದ ಹುನ್ನಾರಗಳೆಲ್ಲವನ್ನೂ ನೋಡಿದರೆ  ಏನೇನೋ ನೆನಪಾಗುತ್ತವೆ. ಸಾಂಪ್ರದಾಯಿಕ ಕೃಷಿಯಲ್ಲಿ ಇಂದಿಗೂ ಒಂದು ಪದ್ದತಿಯಿದೆ. ನಾಟಿ ಕೆಲಸ ಮುಗಿಸಿ, ಪೈರುಗಳು ಮೇಲೇಳುವ ಹಂತದಲ್ಲಿ ಶುರುವಾಗುವ ಪ್ರಾಣಿ-ಪಕ್ಷಿಗಳ ಕಾಟಕ್ಕೆ ಕೃಷಿಕರು ಬೆದರುಗೊಂಬೆಯನ್ನು ಜನರು ಇಂದಿಗೂ ನಿಲ್ಲಿಸುತ್ತಾರೆ. ಅದು ಡೆಮ್ಮಿ ಮನುಷ್ಯ. ಅದು ಕೈ ಅಲ್ಲಾಡಿಸುವುದಿಲ್ಲ. ಕಾಲು ಚಲಿಸುವುದಿಲ್ಲ. ಕೇವಲ ಬೆರ್ಚಪ್ಪ. ಈ ಗೊಂಬೆಯನ್ನು ನೋಡಿ ಪೈರಿಗೆ ಧಾಳಿ ಮಾಡುವ ಪ್ರಾಣಿಗಳು, ಪಕ್ಷಿಗಳು ಭ್ರಮೆಗೊಳಗಾಗುತ್ತವೆ.  ಹಾಗೆಯೇ ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಲು ಬೆರ್ಚಪ್ಪನನ್ನು ನಿಲ್ಲಿಸಿದಂತೆನಿಸುತ್ತದೆ. ಪ್ರಾಣಿ-ಪಕ್ಷಿಗಳಂತೆ ಜನರೂ ಭ್ರಮೆಗೊಳಗಾದವರಂತೆ ಕಾಣುತ್ತಾರೆ.

Friday, July 6, 2012

ಪ್ರಭುತ್ವ, ನಾಯಕ ಮತ್ತು ನಾಳಿನ ದೇಶ


ದೇಶ ಪ್ರಜಾತಂತ್ರ ಗಣರಾಜ್ಯವಾಗಿ ಆರು ದಶಕಗಳು ದಾಟಿದವು. ಒಂದು ಸಂಗತಿಯನ್ನು ಮನಪೂರ್ವಕ ಅನುಭವಿಸಲು, ಸಂಪೂರ್ಣ ತಿಳಿದುಕೊಳ್ಳಲು ಇದು ತುಸು ದೀರ್ಘವೇ ಆದಂಥ ಅವ. ಆದರೆ ಇಂದು ಪ್ರಜಾಪ್ರಭುತ್ವವನ್ನು "ಪ್ರಜೆಗಳು, ಪ್ರಜೆಗಳಿಂದ, ಪ್ರಜೆಗಳಿಗಾಗಿ" ಎಂದು ಎಷ್ಟೇ ಬೊಬ್ಬೆಹೊಡೆದರೂ ಯಾಕೋ ಮನಸ್ಸಿನೊಳಗಿಂದ "ಹೌದು" ಎನ್ನುವಂಥ ಉತ್ತರ ಬರಲಾರದು. ಇಂದಷ್ಟೇ ಅಲ್ಲ, ಕಳೆದ ಆರು ದಶಕಗಳಿಂದಲೂ ಅಂಥ ಉತ್ತರ ಬಂದಿದ್ದು ಕಡಿಮೆಯೇ. ಆದರೆ ಎಲ್ಲರೂ ಪ್ರಜಾಪ್ರಭುತ್ವದಿಂದ ಸಂತುಷ್ಟರಾದಂತೆ ನಾಟಕವಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲೂ ನಾಟಕವಾಡಲೇ ಬೇಕು. ಅದೂ ತನ್ನ ಮೇಲಿನ ನಿಂದೆಯನ್ನು  ಸಹಿಸುವುದಿಲ್ಲ. ಅದೂ ಕೂಡಾ ಪ್ರಜೆಗಳನ್ನು ಶಿಕ್ಷಿಸುತ್ತದೆ. ಪ್ರಜಾಪ್ರಭುತ್ವದಲ್ಲೂ ಕ್ಷಿಪ್ರ ಬೆಳವಣಿಗೆಗಳು ಸಂಭವಿಸಬಹುದು. ಹಾಗಾಗಿ "ಇಲ್ಲ ಪ್ರಜಾಪ್ರಭುತ್ವವೆಂದರೆ ಹಾಗಿಲ್ಲ" ಎನ್ನುವಂತಿಲ್ಲ. ಹಾಗಂದರೆ ಪ್ರಜಾಪ್ರಭುತ್ವವನ್ನೇ ಧಿಕ್ಕರಿಸಿದ ಅಪಾಯ ಎದುರಾಗಿಬಿಡುತ್ತದೆ. ಸರ್ವಾಧಿಕಾರದ ಪರ ಎಂಬ ಆರೋಪ ಬಂದುಬಿಡುತ್ತದೆ. ಇನ್ನೂ ಮುಂದುವರಿದರೆ "ಅಫಿಮ್" ನವರು ಎನ್ನುವ ಆಪಾದನೆಗಳೂ ಬಂದುಬಿಡಬಹುದು. ಇವಿಷ್ಟನ್ನು ಬಿಟ್ಟರೆ ಪ್ರಜಾಪ್ರಭುತ್ವವನ್ನು ಪರಿಶೀಲಿಸುವ ಸಾಮಾನ್ಯನಿಗೆ  ಪರ್ಯಾಯವಾದ ದಾರಿಯೊಂದು  ಎದುರಾಗುವುದಿಲ್ಲ. ಮತ್ತು ಆತ ಪರ್ಯಾಯವಲ್ಲದ, ಪ್ರಜಾಪ್ರಭುತ್ವದ ನಾಡಿಯನ್ನು ಮೀಟಬಲ್ಲ ಸಂಗತಿಯ ಬಗ್ಗೆ ಯೋಚಿಸಲು ಹೋಗುವುದಿಲ್ಲ. ಹಾಗಾಗಿ ಪ್ರಜೆಗಳು, ಪ್ರಜೆಗಳಿಂದ ಎಂಬ ಪ್ರಪಂಚ ಸದಾ ಒಣಒಣವಾಗಿ , ಸಂಪೂರ್ಣ ನಾಟಕಕಾರರ ಜಗತ್ತಾಗಿ ಮುಂದುವರಿಯುತ್ತದೆ. ಅದು ಪ್ರಜಾಪ್ರಭುತ್ವದ ಎಡವಟ್ಟೋ ಅಥವಾ ಆಚರಣೆಯ ಹೊತ್ತಲ್ಲಿ ಆದ ಆವಾಂತರಗಳೋ ಗೊತ್ತಿಲ್ಲ. ಆದರೆ ಒಟ್ಟು ಪ್ರಜಾಪ್ರಭುತ್ವ ಭಾರತದಲ್ಲಂತೂ ಪ್ರಜೆಗಳನ್ನು ಪ್ರಭುಗಳನ್ನಾಗಿ ಮಾಡದ , ಪ್ರಜೆ ಎಂಬ ಸ್ಥಾನ ಒಂಚೂರೂ ಮೇಲೆ ಹೋಗದ, ಸದಾ ಬಲಿಪಶುವಾಗುವ , ತನ್ನದೇನೂ ನಡೆಯದ, ಹೊರಬರಲಾಗದ, ಅದರೊಳಗೇ ಬಂಯಾಗುವ, ಆಡಳಿತದ ಆಗುಹೋಗುಗಳು ಅರಿವಾಗದ, ಒಂದಿಷ್ಟು ಜನರ ವಿಜ್ರಂಭಣೆಯಾಗಿರುವುದಂತೂ ಸತ್ಯ. ಹೀಗಿರುತ್ತಾ "ಪ್ರಜೆಗಳು ಪ್ರಜೆಗಳಿಗಾಗಿ..." ಎನ್ನುವ ಮಂತ್ರ ಜಪಿಸುವುದು ಆತ್ಮವಂಚನೆಯೇ ಸರಿ. ವಿಪರ್ಯಾಸವೆಂದರೆ ಇಂದು ಭಾರತದ ಬಹುಪಾಲು ಜನರು ಆತ್ಮವಂಚಕರೇ.
ಕಾರಣಗಳಿವೆ. ಭಾರತೀಯ ಮನಸ್ಸುಗಳಿಗೆ  ಈ ನಾಟಕೀಯವಾದ ಬದುಕಿಗಿಂತ ಮತ್ತೇನೋ ಒಂದರ ತುಡಿತವಿದೆ. ತನ್ನ ಜೀವನ ವಿಧಾನ, ಪದ್ದತಿ, ಆಚರಣೆ, ಸಂಸ್ಕೃತಿ, ಸಂಸ್ಕಾರಗಳು ಆತನಲ್ಲಿ ಮತ್ತೇನೋ ಒಂದರ ಆಲೋಚನೆಯನ್ನು ಮೂಡಿಸುತ್ತದೆ. ಅದು ಪ್ರಜೆಗಳು, ಪ್ರಜೆಗಳಿಂದ ಎಂಬಂಥ  ಒಣ ಒಣವಾದ ಸಿದ್ಧಾಂತವಲ್ಲ. ಅದು ಪ್ರಜೆಗಳು ನರಳುವಂಥಾದ್ದೂ ಅಲ್ಲ. "ಅಫಿಮಿನ" ಜನರು ಕಂಡ ಕನಸ್ಸಿನಂಥಾದ್ದೂ ಅಲ್ಲ. ಅದು ಬೇರೆಯೇ ಆದುದು. ಆ ಕಾರಣಕ್ಕೆ ಇಂದಿನ ಆಧುನಿಕವೆಂಬ ಪ್ರಜಾಪ್ರಭುತ್ವದಲ್ಲಿ ಕೂತು ಆಡಳಿತವನ್ನು ಮೈದುಂಬಿಕೊಳ್ಳಲು  ಆತ ಇತಿಹಾಸದ ಬೆನ್ನು ಹತ್ತುತ್ತಾನೆ. ಮರ ಕಡಿದು ರಸ್ತೆ ಮಾಡಲೆಂದೇ ಇಲಾಖೆಗಳು ಇರುವ ಹೊತ್ತಿನಲ್ಲಿ ಮಾರ್ಗ ಬದಿಯಲ್ಲಿ ಸಾಲು ಮರಗಳನ್ನು ನೆಡಿಸಿದ ಅಶೋಕ  ಪುಳಕ ತರುತ್ತಾನೆ. ರೂಪಾಯಿ ಮೌಲ್ಯಗಳು ಕುಸಿಯುಯುತ್ತಾ  ಹೋಗುತ್ತಿರುವಾಗ ಚಂದ್ರ ಗುಪ್ತ ಮೌರ್ಯನ ಆಡಳಿತ ಹೇಗಿರಬಹುದು ಎಂಬುದನ್ನು ಮನಸ್ಸು ಲೆಕ್ಕ ಹಾಕುತ್ತದೆ. ಅಣೆಕಟ್ಟುಗಳ ಎತ್ತರದ ವಿವಾದ , ಆದರೂ ನೀರಿಲ್ಲದೆ ಬಸವಳಿಯುವ ಬಯಲಸೀಮೆಯ ಕಥೆಯ ನಡುವೆ ಕೃಷ್ಣದೇವರಾಯನ ಕಾಲದ ನೀರಿನ ತಂತ್ರಗಳು ನೆನಪಿಗೆ ಬಂದು ಇದ್ದರೆ ಇಂಥ ಪ್ರಭುತ್ವವಿರಬೇಕು ಎಂದು ಇಂದಿಗೆ ವರ್ಜ್ಯವಾದ ಸರ್ವಾಧಿಕಾರದ ಕಾಲವನ್ನು ನೆನೆಯುತ್ತದೆ. ಇದೂ ಕೂಡಾ ಒಂದು ವಿಚಿತ್ರ. ಸದ್ಯ ನಡೆಯುತ್ತಿರುವುದು ಸಂಕಟ, ನಡೆದುಹೋದುದು ಯಾವತ್ತೂ ಸಂತಸ ಎಂಬ ಮಾಮೂಲು ತತ್ತ್ವಕ್ಕಿಂತಲೂ ಇದು ಭಿನ್ನ. ನಡೆದುಹೋದುದನ್ನು ಮನುಷ್ಯ ಕೇವಲ ನೆನಪು ಮಾಡಿಕೊಳ್ಳಬಹುದು. ಆದರೆ ಇಲ್ಲಿ ನಡೆದುಹೋದ ಹಳೆಯ ಸಂಗತಿಗಳನ್ನೇ ಮನಸ್ಸು ಬಯಸುತ್ತದೆ. ಅದು ಸದ್ಯದ ಪ್ರಭುತ್ವದ ಬಿಡುಗಡೆಯ ಬಯಕೆ ಮತ್ತು ಉದ್ದಾರದ ಆಸೆ.
 ಆ ಎರಡು ಪ್ರಭುತ್ವಗಳ ನಡುವಿನ ಮಧ್ಯಮ ಮಾರ್ಗವೊಂದಿದೆ. ಅದೇ ಹಿಂದುತ್ವ. ಹಿಂದೂ ರಾಜಧರ್ಮ. ಇತ್ತೀಚೆಗೆ ರಾ. ಸ್ವ. ಸಂಘದ ಸರಸಂಘಚಾಲಕರು ಹಿಂದೂ ರಾಷ್ಟ್ರದಲ್ಲಿ ಹಿಂದೂ ಒಲವಿರುವ ವ್ಯಕ್ತಿಯೇ ಪ್ರಧಾನಿಯಾಗಬೇಕು ಎಂದಿದ್ದು ಇದೇ ಅರ್ಥದಲ್ಲಿರಬೇಕು. ಏಕೆಂದರೆ ಪ್ರಭುತ್ವಕ್ಕೆ ಒಂದು ವಿಚಿತ್ರವಾದ ಗುಣವಿದೆ. ರಾಜನೇ ಆಳಲಿ, ಗುಲಾಮನೇ ಪ್ರಭುತ್ವದ ಚಿಕ್ಕಾಣಿ ಹಿಡಿಯಲಿ ಎರಡೂ ಪರಿಸ್ಥಿತಿಗಳಲ್ಲಿ ಅಪಾಯಗಳ ಸಂಬವವಿರುತ್ತದೆ. ಅಧಿಕಾರವೆಂಬುದು ಅಂಥಾದ್ದು. ಆದರೆ ಸಂಸ್ಕೃತಿ, ಸಂಸ್ಕಾರಗಳು ಒರ್ವ ವ್ಯಕ್ತಿಯನ್ನು ನಿರ್ಮಾಣ ಮಾಡುವುದರಿಂದ ಆತ ಅಧಿಕಾರವನ್ನೂ ವ್ಯವಸ್ಥಿತವಾಗಿ ಸರಿದೂಗಿಸಿಕೊಂಡುಹೋಗಬಲ್ಲ. ಆ ಸಂಸ್ಕೃತಿ, ಸಂಸ್ಕಾರಗಳೇ ಹಿಂದುತ್ವ. ಅದು ಭಾರತವನ್ನು ಇನ್ನೂ ಅಳಿಯದೇ ಉಳಿದಿರುವಂತೆ ಮಾಡಿದೆ.  ಅದರ ಕಣಗಳು ಇಲ್ಲದೇ ಇರುತ್ತಿದ್ದರೆ ಇಂದು ಯಾವ ಸಂವಿಧಾನ, ಯಾವ ಕಾನೂನುಗಳ ತರುವಾಯವೂ ಭಾರತ ಭಾರತವಾಗಿ ಉಳಿಯುತ್ತಿರಲಿಲ್ಲ. ಅಲ್ಲಿ ಎಲ್ಲದಕ್ಕೂ ಉತ್ತರವಿದೆ. ಭಾರತವನ್ನು ಭಾರತವಾಗಿ ಉಳಿಸಬಲ್ಲ ತಾಕತ್ತಿದೆ. ಇಲ್ಲದಿದ್ದರೆ ನಿರಂಕುಶ ಮತಿಗಳ ಪುರಾತನ ಅರಸರಾದರೂ ಇಂದು ಯಾಕಾಗಿ ನೆನಪಾಗಬೇಕು? ಆ ಎಲ್ಲಾ ಅರಸರ ರಾಜಧರ್ಮ, ಧರ್ಮಾಡಳಿತದ ಪ್ರಭುತ್ವಗಳು ಈ ಕಾರಣಕ್ಕಾಗಿಯೇ ಇಂದಿಗೂ ನಮಗೆ ನೆನಪಾಗುತ್ತವೆ.
ಏನೇನಾಗಿಹೋಯಿತು ಈ ಆರು ದಶಕಗಳಲ್ಲಿ? ಸೋಷಿಯಲಿಷ್ಟರೆಂಬ ಜನರು ಬಂದುಹೋದರು. ತಾವೇ ಬುದ್ಧಿಜೀವಿಗಳೆಂದು ಮೆರೆದರು. "ಇಂಡಿಯಾ ದೇಶ" ವನ್ನು ಪಾಶ್ಚಾತ್ಯ ರೀವಾಜಿಗೆ ತರುವೆವೆಂದು ಪಣತೊಟ್ಟು ನಿಂತರು. ಸ್ವಾತಂತ್ರ್ಯ ಬಂದ ಎಳವೆಯಲ್ಲಿ ನೆಹರೂರಂಥವರು " ನಾವೊಂದು ರಾಷ್ಟ್ರವನ್ನು ಕಟ್ಟುತ್ತಿದ್ದೇವೆ" ಎಂದೂ ಉದ್ಗರಿಸಿದರು. ಇನ್ನೂ ಜೀವಂತವಿದ್ದ ಭಾರತ ಅವರಾರಿಗೂ ನೆನಪಿಗೆ ಬರಲಿಲ್ಲ. ಇದೊಂದು ಬಲಿಷ್ಠ ರಾಷ್ಟ್ರವಾಗಿತ್ತೆಂಬುದೂ ಅವರಿಗೆಲ್ಲಾ ಮರೆತೇ ಹೋಗಿತ್ತು. ಏಕೆಂದರೆ ಕೃಷ್ಣನೆಂದ ಪ್ರಜ್ನಾವಾದದ ವಿಸ್ಮೃತಿಯಲ್ಲಿ  ನೆಹರೂ ಮುಳುಗಿಹೋಗಿದ್ದರು. ತಾನು ಹಿಂದುವಾಗಿ ಹುಟ್ಟಿದ್ದು ತೀರಾ " ಆಕಸ್ಮಿಕ" ಎಂದಿದ್ದರು. ಇಂಥ ಪ್ರಭುವನ್ನು  ಹೊಂದಿದ ದೇಶ ಆರು ದಶಕಗಳ ತರುವಾಯ  ಮುಟ್ಟಬಾರದ ಸ್ಥಿತಿಯನ್ನು  ಮುಟ್ಟಿದೆ ಎನ್ನುವುದರಲ್ಲಿ ಆಶ್ಚರ್ಯವಿಲ್ಲ. ಹಾಗಾದರೆ ಕಾರಣ ಮತ್ತು ಪರಿಹಾರಗಳಲ್ಲಿ ನಿಚ್ಚಳತೆ ಇದೆ. ಹಿಂದೂ ಎನ್ನುವುದು ಅಸಹ್ಯ ಎಂಬುವವನಿಂದ ಆದ ಎಡವಟ್ಟುಗಳನ್ನು ನೀಗಿಸುವುದು  ಹಿಂದೂ ಎಂದು ಹೆಮ್ಮೆ  ಪಡುವವನಿಂದ ಮಾತ್ರವೇ ಸಾಧ್ಯ ಎನ್ನುವುದು ಸಹಜ ತರ್ಕ. ಇದೇ ಸರಸಂಘಚಾಲಕರ ಮಾತಿನ ಮತಿತಾರ್ಥವಿರಬೇಕು.
ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಪ್ರಭುತ್ವ ನಮ್ಮ ಜನರ ಸಾಂಸ್ಕೃತಿಕ ಬದುಕಿನ ಬೇರುಗಳಿಗೆ , ನೆಮ್ಮದಿ ತರುವ ನಂಬಿಕೆಗಳಿಗೆ ಆಘಾತವನ್ನೇ ಮಾಡುತ್ತಲೇ ಬಂದಿತು.ಮೊದಲಿಗೆ ದೇವರನ್ನು ಧಿಕ್ಕರಿಸಿದರು. ರಾಜಧರ್ಮವನ್ನು ಕೋಮುವಾದ ಎಂದರು. ಅಫಿಮನ್ನು ಉದಾಹರಿಸುವವರು  ಧರ್ಮವನ್ನು ಮತೀಯ ಮತ್ತು ಕೋಮು ಎಂಬ ನೆಲೆಗಳಲ್ಲೇ ಅರ್ಥೈಸಿದರು. ರಾಜಕೀಯದ ಆಟಾಟೋಪಗಳಿಗೆಬೇಕಾಗಿ ಧರ್ಮವನ್ನು ಅಸ್ಪೃಶ್ಯವಾಗಿಯೇ ಇಡಲಾಯಿತು. ಮುಂದೆ ಕಾಲ ಓಡಿದಂತೆ ಅಫಿಮಿನ ಮಾತನಾಡುವ ಕೆಂಪು ಕಮ್ಯುನಿಷ್ಠರು ತಮ್ಮ ರಂಗನ್ನು ಕಳೆದುಕೊಳ್ಳಲಾರಂಭಿಸಿದರು. ಕಾಂಗ್ರೆಸ್ ಅದರ ಸ್ಥಾನವನ್ನು ತುಂಬಿತು.ಸೆಕ್ಯುಲರಿಸಂ ಹೆಸರಿನ ಹೊಸ ಆತ್ಮ ವಂಚನೆ ಎಗ್ಗಿಲ್ಲದೆ ನಡೆಯಿತು. ಹಿಂದೂ ಬಲಿಯಾದ, ತಾನು ಹಿಂದುವೆಂಬ ಒಂದೇ ಕಾರಣಕ್ಕೆ ಬಲಿಯಾದ. ಎಲ್ಲವೂ ಪ್ರಜೆಗಳು ಪ್ರಭುಗಳು ಎಂಬ ಸಿದ್ದಾಂತದ ಅಡಿಯಲ್ಲೇ ನಡೆದವು. ಹಾಗಾದರೆ ಪರಿಹಾರ ಹಿಂದೂ ವ್ಯಕ್ತಿಯ ಚುಕ್ಕಾಣಿಯಿಂದಲೇ ಅಲ್ಲವೇ?
ಕಾಲದ ಚಲನಶೀಲಗುಣವೇ ಅಂಥದ್ದು. ಎಷ್ಟೇ ನಾಗಾಲೋಟದ ಯುಗದಲ್ಲೂ ನೆನಪುಗಳು ಗರಿಗೆದರಲೇ ಬೇಕು. ಗರಿಗೆದರುವುದಷ್ಟೇ ಅಲ್ಲ , ಕಳೆದುಹೋದುದನ್ನು ಹುಡುಕಲೇ ಬೇಕು. ಅದು ಆರೋಗ್ಯವಂತ ಲಕ್ಷಣ. ಈ ಹೊತ್ತಲ್ಲಿ ನೆನಪುಗಳನ್ನು ಅಳಿಸುವ ರಕ್ಕಸೀ ಗುಣ ಪ್ರಜಾಪ್ರಭುತ್ವದಲ್ಲೇ ನಡೆದರೆ ಅದಕ್ಕಿಂತಲೂ ನೆನಪುಗಳನ್ನು ಅರಸುವ ಸರ್ವಾಧಿಕಾರವೇ ಲೇಸು ಎನಿಸುತ್ತದೆ. ಇಂದು ಭಾರತದಲ್ಲಿ ನೆನಪುಗಳನ್ನು ಅಳಿಸುವ ಕಾರ್ಯ ನಡೆಯುತ್ತಿದೆ. ಸಾಂಸ್ಕೃತಿಕ ಕುರುಹುಗಳು ಮತೀಯವಾಗುತ್ತಿವೆ. ಇಂದು ಪ್ರಭುತ್ವಕ್ಕೆ  ಭಾರತದ ಸಮಾಧಿಯಲ್ಲಿ ಇಂಡಿಯಾ ಕಟ್ಟುವ ಕನಸ್ಸುಗಳೇ ತುಂಬಿವೆ. ಆದರೆ ಆರೋಗ್ಯವಂತ ಮನಸ್ಸುಗಳು ನೆನಪುಗಳನ್ನು ಹುಡುಕುತ್ತಿವೆ. ನನಸು ಮಾಡಲು ಹಾತೊರೆಯುತ್ತಿದೆ. ಆದ್ದರಿಂದ ಬಾಂಬೆ ಮುಂಬೈ ಆಗುತ್ತಿದೆ. ಮದರಾಸು ಚೆನ್ನೈ ಆಗುತ್ತಿದೆ. ಉಪಗ್ರಹ ಉಡಾವಣೆಗೆ  ಮುನ್ನ ಪೂಜೆಗಳು ನಡೆಯುತ್ತಿವೆ. ವಿಜ್ನಾನಿಗಳು ನೆಟ್ಟ ಪೈರಿನ ಗದ್ದೆಗಳಲ್ಲಿ ಬೆರ್ಚಪ್ಪಗಳು ನಿಂತಿರುತ್ತವೆ. ಇದೇ ಅಳಿಯದೇ ಉಳಿದಿರುವ ಮಾನಸ ಭಾರತದ ಲಕ್ಷಣ.
ಮಾನ್ಯ ಸರಸಂಘಚಾಲಕರ ಆಶಯದೊಳಗೆ ಪಯಣಿಸಿದರೆ ಇವೆಲ್ಲವೂ ಒಂದೊಂದಾಗಿ ಎದುರಾಗುತ್ತಾ ಹೋಗುತ್ತವೆ. ಪ್ರಭುಗಳ ಒಳನೋಟಗಳು, ಆಳಿದವರ ಪ್ರಜ್ನಾವಾದಗಳು, ಸಂಸ್ಕೃತಿಯ ಚಹರೆಗಳು, ತುಡಿಯುವ ಮನಗಳು ಸುತ್ತಲೂ ಕಾಣುತ್ತವೆ. ಎಲ್ಲಾ ಎಡವಟ್ಟುಗಳಿಗೆ ಹಿಂದೂ ಮನದ ನಾಯಕ  ಪರಿಹಾರರೂಪದಲ್ಲಿ ಕಾಣುತ್ತಾನೆ. ಆತ ಪ್ರಜ್ವಲಿಸುವ ಭಾರತದ ಧ್ರುವತಾರೆಯಂತೆ, ಇನ್ನೂ ಪೂರ್ತಿ ಅಳಿಯದ ಗುಲಾಮತನದ ಶತ್ರುವಿನಂತೆ, ಪ್ರಜೆಗಳ ಪ್ರಭುವಾಗುವ , ಕೊಂಚ ಜಿಗುಟಿನ, ಕೊಂಚ ಒರಟಿನ  ವಿಕ್ರಮಾಧಿತ್ಯನಂತೆ ಕಾಣುತ್ತಾನೆ. ಹಿಂದೂ ನಾಯಕನಿರುವುದು ಹಾಗೆಯೇ. ಇಂದು ಭಾರತಕ್ಕೆ ಬೇಕಾಗಿರುವುದೂ ಅಂಥವನೇ.