Friday, October 28, 2011

ದರ್ಶನಶಾಸ್ತ್ರ ಇತಿಹಾಸವಲ್ಲವೇನು?


ಇಂಗ್ಲಿಷಿನ ಪಿಲಾಸಫಿ ಇಂದು ಜಗತ್ತಿನಲ್ಲಿ ಅತ್ಯಂತ ಜನಪ್ರೀಯ ಶಾಸ್ತ್ರ. ವಿವಿಧ ಜನವರ್ಗಕ್ಕೆ ಪ್ರಿಯವಾದ ಪಿಲಾಸಫಿ ಇಂದು ಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಕಲಿಸಲ್ಪಡುತ್ತಿದೆ. ಅದರ ಜನಪ್ರಿಯತೆಗೆ ಕಾರಣವೇನೆಂದು ಚಿಂತಿಸಿದರೆ ಕಾಣುವುದು ಮನುಷ್ಯನೇ. ಆತನ ಮೂಲವೇ. ಏಕೆಂದರೆ ಮನುಷ್ಯ ಮೂಲತಃ ಕುತೂಹಲಿ. ತಾನಾರು? ತಾನು ಎಲ್ಲಿಂದ ಬಂದವನು ಎಂಬ ಪ್ರಶ್ನೆಗಳ ಸುಳಿಯೊಳಗೆ ಸಾಗುವುದೇ ಈ ಪಿಲಾಸಫಿ. ಭಾರತೀಯ ಪರಿಭಾಷೆಯಲ್ಲಿ ಈ ಪಿಲಾಸಫಿಯನ್ನು ವೇದಾಂತ ಎಂದು ಕುಹಕ ನುಡಿಯುವವರಿದ್ದಾರೆ. ಅಲ್ಲದೆ ಭಾರತೀಯ ತತ್ತ್ವಶಾಸ್ತ್ರಕ್ಕೂ ಪಾಶ್ಚಾತ್ಯ ಪಿಲಾಸಫಿಗೂ ವ್ಯತ್ಯಾಸಗಳಿವೆ. ಪಾಶ್ಚಾತ್ಯ ಪಿಲಾಸಫಿಯ ಉದ್ದೇಶ ಕುತೂಹಲವನ್ನು ತಣಿಸುವುದು ಮಾತ್ರವಾಗಿದ್ದರೆ ಭಾರತೀಯ ತತ್ತ್ವಶಾಸ್ತ್ರ ಚಿಂತನ ಪ್ರಧಾನವಾದದ್ದು. ಚಿಂತನೆಯಾಧಾರದಲ್ಲಿ ಅರಿವನ್ನು ಹುಡುಕುತ್ತಾ ಮಾನವತೆಯನ್ನು ಹುಡುಕುವುದು. ಚಿಂತನೆಯಲ್ಲೇ ಸಮಾಜವನ್ನು ಅರಿಯುವುದು. ಸಾಗುತ್ತಾ ಸಾಗುತ್ತಾ ಉತ್ತುಂಗವೆಂಬ "ಸ್ಥಿತಿ"ಯನ್ನು ಮುಟ್ಟುವುದು. ಆ "ಸ್ಥಿತಿ" ಎಂಬುದು ಪಡೆದವರಷ್ಟೇ ಅರಿತ ಅಂತಿಮ ಸತ್ಯ. ಆ "ಸ್ಥಿತಿ"ಪಾಶ್ಚಾತ್ಯದಂತೆ ಕತ್ತಲ ಕೋಣೆಯಲ್ಲಿ ಕರಿ ಬೆಕ್ಕನ್ನು ಹುಡುಕಿದಂತಲ್ಲ. ಹಾಗಾಗಿ ಭಾರತೀಯ "ದರ್ಶನ"ಗಳಿಗೂ ಪಾಶ್ಚಾತ್ಯ ಪಿಲಾಸಫಿಗೂ ವ್ಯತ್ಯಾಸವಿದೆ.
ಭಾರತದಲ್ಲಿ ಪಿಲಾಸಫಿ ಒಂದು ಶಾಸ್ತ್ರ, ಜ್ಞಾನ ಮೀಮಾಂಸೆ, ಅರಿವಿನ ಹುಡುಕಾಟ, ತನಗೆ ಇಂದ್ರಿಯಗಳು ಇರುವುದು ವಾಸ್ತವವೆಂದಾದರೆ ಅದು ತನ್ನೊಬ್ಬನಿಂದಲೇ ನಡೆಯತಕ್ಕದ್ದಲ್ಲ. ಹಾಗಾದರೆ ಅದೇನು ಎಂಬಲ್ಲಿಂದ ಪ್ರಾರಂಭಗೊಂಡು ಯಾವುದು ನಿಜ? ಯಾವುದು ಭ್ರಮೆ? ಎಲ್ಲಿದೆ ವ್ಯಾಪ್ತಿ? ಎಲ್ಲಿದೆ ಮಿತಿ? ಎಂಬ ತರ್ಕಗಳೆಡೆಗೆ ಸಾಗುವುದು ಭಾರತೀಯ ತತ್ತ್ವಶಾಸ್ತ್ರದ ಲಕ್ಷಣ. ಭಾರತೀಯ ತತ್ತ್ವಶಾಸ್ತ್ರಗಳು ಏಕಕಾಲಕ್ಕೆ ಇತಿಹಾಸವೂ ಹೌದು, ದರ್ಶನವೂ ಹೌದು. ಆದರೆ ಪಾಶ್ಚಾತ್ಯ ಚೌಕಟ್ಟಿನ ಕತ್ತಲೆ ಕೋಣೆಯಲ್ಲಿ ಕರಿಬೆಕ್ಕು ಹುಡುಕುವ ಪ್ರಕ್ರಿಯೆ ವಿಡಂಭನಾತ್ಮಕವಾಗಿ ಕಾಣುವುದಷ್ಟೇ ಅಲ್ಲದೆ ಭಾರತೀಯ ತತ್ತ್ವಗಳೆಡೆಯಲ್ಲಿ ಅವು ತೀರಾ ಕ್ಷಣಿಕವೆಂದು ಕಾಣುತ್ತವೆ. ಅಂಥಲ್ಲಿ ಅರಿವನ್ನು ಹುಡುಕುವವರಿಗೆ ವಿಷವಿಕ್ಕಿದ ಉದಾಹರಣೆಗಳೂ ಸಿಗಬಹುದೇ ಹೊರತು ಭಾರತೀಯ ದರ್ಶನ ಶಾಸ್ತ್ರಗಳಲ್ಲಿ ಅಂಥ ಸಂಗತಿಗಳು ಗೋಚರಿಸುವುದಿಲ್ಲ.
ಭಾರತದಲ್ಲಿ ಹುಟ್ಟಿಬೆಳೆದ ದರ್ಶನಗಳಲ್ಲಿ ಹಲವಾರು ಪ್ರಬೇಧಗಳು. ಅವು ಇತಿಹಾಸದ ಮೂಸೆಯಲ್ಲಿ ಅದ್ದಿ ತೆಗೆದವುಗಳಲ್ಲದೆ ಬೇರೇನೂ ಅಲ್ಲ. ಆಯಾಯ ಕಾಲಘಟ್ಟದಲ್ಲಿ ನಡೆದ ಸಾಮಾಜಿಕ ಸ್ಥಿತ್ಯಂತರಗಳ ಹಿಂದೆ ಭಾರತೀಯ ದರ್ಶನಗಳ ನೆರಳಿದೆ. ಸಮಾಜವನ್ನು ಆಯಾಯ ದರ್ಶನಗಳಿಂದಲೇ ಗುರುತಿಸುವಷ್ಟು ಪ್ರಬಲವಾಗಿದ್ದವೆಂದರೆ ದರ್ಶನಗಳು ಇತಿಹಾಸದ ಮಹಾಘಟ್ಟಗಳಲ್ಲದೆ ಮತ್ತೇನು? ಈ ಹಿನ್ನಲೆಯಲ್ಲಿ ಅಧ್ಯಯನದ ದೃಷ್ಟಿಯಿಂದ ಅವುಗಳನ್ನು ವಿಂಗಡಿಸುವುದೇ ಬಹು ಶ್ರಮದಾಯಕ ಕೆಲಸ ಎಂಬುದನ್ನು ವಿದ್ವಾಂಸರೇ ಅಭಿಪ್ರಾಯಪಟ್ಟಿದ್ದಾರೆ. ಆ ಶ್ರಮದಾಯಕ ಕೆಲಸ ದರ್ಶನಗಳನ್ನು ಇತಿಹಾಸವೆಂಬ ಪಟ್ಟದಿಂದ ದೂರವಾಗಿಸಿದೆಯೇ ಎಂಬ ಸಂದೇಹವೂ ಉಂಟಾಗುತ್ತದೆ. ಅಲ್ಲದೆ ಪಾಶ್ಚಾತ್ಯ ರಿವಾಜಿನಂತೆ ತತ್ತ್ವಶಾಸ್ತ್ರಗಳು ಇತಿಹಾಸಗಳಲ್ಲ. ಅದು ಬೇರೆಯೇ ಆದ ಶಾಸ್ತ್ರ. ಅಲ್ಲಿ ತತ್ತ್ವಶಾಸ್ತ್ರ ಮತ್ತು ಇತಿಹಾಸಗಳಿಗೆ ವಿಭಿನ್ನವಾದ ವ್ಯಾಖ್ಯಾನಗಳಿವೆ. ಆ ವ್ಯಾಖ್ಯಾನಗಳು ಅಲ್ಲಿಗೆ ಅನ್ವಯಿಸುವುದು ಸರಿಯಾಗಿರಬಹುದು. ಆದರೆ ತತ್ತ್ವಶಾಸ್ತ್ರಕ್ಕೂ ಇತಿಹಾಸಕ್ಕೂ ನೇರಾನೇರಾ ಸಂಬಂಧವಿರುವ ಭಾರತದಂತಹ ದೇಶದಲ್ಲಿ ದರ್ಶನಗಳನ್ನು ಇತಿಹಾಸಗಳೆಂದು ಏಕೆ ಪರಿಗಣಿಸುತ್ತಿಲ್ಲ?
ಪ್ರಸ್ತುತ ಇತಿಹಾಸವೆಂಬ ಶಾಸ್ತ್ರಕ್ಕೆ ಪ್ರಮಾಣಗಳು ಬೇಕಾಗಿವೆ. ಏಕೆಂದರೆ ಇದು ಪ್ರಬಲವಾಗಿ ಮಂಡಿಸತಕ್ಕ ಮತ್ತು ಸಕಲ ವೈಖರಿಯೊಡನೆ ವಾದಿಸತಕ್ಕ ವಿಷಯ. ಇಂಥ ವಿಷಯಕ್ಕೆ ಅನಿವಾರ್ಯವಾಗಿ ಸೀಮಿತತೆಯೊಂದು ತನ್ನಿಂದತಾನೇ ಸೃಷ್ಟಿಯಾಗಿಬಿಟ್ಟಿರುತ್ತದೆ. ಅದು ಅದರ ಕೊರತೆ. ಈ ಕೊರತೆಗೆ ತರ್ಕ, ಪ್ರಮಾಣಗಳಿರುವ ದರ್ಶನಗಳು ಮರೆಯಲ್ಲಿರಬೇಕು! ಭಾರತೀಯ ದರ್ಶನಗಳ ಅಧ್ಯಯನವೆಂದರೆ ಒಟ್ಟೊಟ್ಟಿಗೆ ಭಾರತೀಯ ಮಾನವೇತಿಹಾಸದ ಅಧ್ಯಯನ ಮತ್ತು ಹಿಂದುತ್ವದ್ದೂ ಅಧ್ಯಯನ. ಆದರೆ ತತ್ತ್ವಶಾಸ್ತ್ರಗಳನ್ನು ಇತಿಹಾಸದ ಚೌಕಟ್ಟಿನಿಂದ ಹೊರಗಿಟ್ಟ ಕಾರಣ ಇವೆರಡೂ ಅಧ್ಯಯನಗಳಿಗೆ ತೊಡಕಾಗಿವೆ. ದ್ವೈತ-ಅದ್ವೈತ-ಸಾಂಖ್ಯ-ಮೀಮಾಂಸ-ಚಾರ್ವಾಕ-ಜೈನ ಇತ್ಯಾದಿಗಳ ಸೆಲೆಗಳು ಇಂದು ಮೂಲೆಗುಂಪಾಗುತ್ತಿವೆ. ದರ್ಶನಗಳ ಸರಿಯಾದ ಜ್ಞಾನವಿಲ್ಲದೆ ಡಾಂಭಿಕತೆಯ ಧಾರ್ಮಿಕತೆಗಳು ನುಸುಳಲು, ಬುದ್ಧಿಜೀವಿಗಳಿಗೆ ತೆಗಳಲು ಸರಕೂ ಆಗಿ ನಮ್ಮೆದುರು ನಿಂತಿವೆ. ಉದಾಹರಣೆಗೆ ಇಂದು ಬೌದ್ಧ ಎಂಬುದು ಇತಿಹಾಸದಲ್ಲಿ ಕಂಡುಬರುವುದು ಅದನ್ನು ಅಳವಡಿಸಿಕೊಂಡ ರಾಜರ ಕಥೆಗಳಿಂದ ಮಾತ್ರ.
ಪಾಶ್ಚಾತ್ಯ ಪ್ರಣೀತ ಇತಿಹಾಸ, ಹಿಂದೂ ದಮನದ ಇತಿಹಾಸ ಮತ್ತು ಅಸತ್ಯವನ್ನೇ ಅಧ್ಯಯನ ಮಾಡಬೇಕಾದ ಅನಿವಾರ್ಯತೆಗಳ ಹಿಂದೆ ದರ್ಶನ ಶಾಸ್ತ್ರವೊಂದು ಉದಾಹರಣೆಯೆನಿಸುತ್ತದೆ. ಪ್ರಸ್ತುತ ಸಂಚಿಕೆಯಲ್ಲಿ ಇತಿಹಾಸದ ಸುತ್ತಮುತ್ತಲಿನ ಸಂಗತಿಗಳನ್ನೇ ಚರ್ಚಿಸಿದ್ದೇವೆ.

Tuesday, October 11, 2011

ಇಂಥ ಸುದ್ಧಿಗಳನ್ನು ಆಕಾಶವಾಣಿಯಿಂದಲೇ ಕೇಳುತ್ತಿದ್ದೀರಿ


ಒಂದು ಕಾಲವಿತ್ತು. ಆಕಾಶವಾಣಿಯೆಂದರೆ ಅದು ಜನರದ್ದೇ ವಾಣಿ ಎಂಬ ಪರಿಸ್ಥಿತಿಯಿತ್ತು.ವಿದ್ಯುತ್ ಇಲ್ಲದ ಕಾಲದಲ್ಲೂ ಹಳ್ಳಿಯಿಂದ ದಿಲ್ಲಿಯವರೆಗಿನ ಜನ ಈ ಅಶರೀರವಾಣಿಯನ್ನು ಎಷ್ಟು ಹಚ್ಚಿಕೊಂಡಿದ್ದರೆಂದರೆ ಅಕಾಶವಾಣಿಯಿಲ್ಲದ ಬದುಕು ಅವರಿಂದ ನಡೆಸಲಾಗುತ್ತಿರಲಿಲ್ಲ. ಅಕ್ಷರಜ್ಞಾನವಿಲ್ಲದ ಜನರು ಪ್ರಪಂಚ ಕಾಣುತ್ತಿದ್ದುದ್ದೇ ಈ ಆಕಾಶವಾಣಿಯಿಂದ. ಒಟ್ಟಾರೆ ಹೇಳಬೇಕೆಂದರೆ ದೇಶವನ್ನು ದೀರ್ಘ ಕಾಲದವರೆಗೆ ರೂಪಿಸಿದ್ದು ,ಅರಳಿಸಿದ್ದು, ಎಜುಕೇಟ್ ಮಾಡಿದ್ದು ಅಕಾಶವಾಣಿಯೇ.ಚೀನಾ ಭಾರತದ ಗಡಿ ನುಸುಳಿದ್ದನ್ನು ,ಗಾಂಧಿ ಗುಂಡಿಗೆ ಬಲಿಯಾಗಿದ್ದನ್ನು, ನೆಹರೂ ಸತ್ತದ್ದನ್ನು ,ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿದ್ದನ್ನು ,ಕಪಿಲ್-ಗವಾಸ್ಕರರ ಆಟಗಳನ್ನು ,ಗೋರ್ಬಚೇವ್ ಅಧಿಕಾರದಿಂದ ಇಳಿದಿದ್ದನ್ನು ,ಸಿಲೋನಿನ ರಕ್ತಪಾತವನ್ನು ,ಅಮಿತಾಬ್ ಬಚ್ಚನ್ನಿನ ಸ್ವರವನ್ನು , ಡಾಬರ್ ಹಲ್ಲಿನ ಪುಡಿಯನ್ನು ಮನೆಮನೆಗೆ ಪರಿಚಯಿಸಿದ್ದು ಮಾಡಿದ್ದು ಆಕಾಶವಾಣಿಯೇ. ಪಾರ್ಲಿಮೆಂಟಿನ ನಿರ್ಣಯಗಳು, ಕೋರ್ಟುಗಳ ಸದ್ಧುಗಳು,ಚುನಾವಣೆಗಳು, ಫಲಿತಾಂಶಗಳು,ಭಾಷಣಗಳು,ಸ್ವಾತಂತ್ರ್ಯೊತ್ಸವಗಳು, ಗಣತಂತ್ರದ ಆಚರಣೆಗಳು ನಮಗೆಲ್ಲಾ ಗೊತ್ತಾಗಿದ್ದು ಆಕಾಶವಾಣಿಯಿಂದ. ಜನರು ಬ್ರೇಕಿಂಗ್ ನ್ಯೂಸ್ ಚಾನೆಲ್ ಭರಾಟೆಯಿಲ್ಲದ ಕಾಲದಲ್ಲೂ ಜನ ಲೋಕಾರೂಡಿ ಮಾತಾಡುವಂತೆ ಮಾಡಿದ್ದು ಕೂಡ ಇದೇ ಅಕಾಶವಾಣಿ. ಅಷ್ಟರಮಟ್ಟಿಗೆ ಆಕಾಶವಾಣಿ ಭಾರತದಲ್ಲಿ ಪ್ರಬಲ. ವಿಶ್ವದ ಹಲವು ರೇಡಿಯೋ ಸಂಸ್ಥೆಗಳಲ್ಲಿ ಎದ್ದು ಕಾಣುವುದು ಭಾರತದ ಈ ಆಕಾಶವಾಣಿ. ಇಂದಿಗೂ ದೇಶದ ಆಯಕಟ್ಟಿನ ಜಾಗಗಳಲ್ಲಿರುವವರು ದೇಶವನ್ನು ಉದ್ದೇಶಿಸಿ ಮಾತನಾಡಲು ಅಕಾಶವಾಣಿಯೇ ಮಾಧ್ಯಮ. ಏಕೆಂದರೆ ಆಕಾಶವಾಣಿ ಪ್ರಜಾಪ್ರಭುತ್ವದ ಮುಖವಾಣಿ. ಅದು ಎಂದೂ ಸರಕಾರದ ಮುಖವಾಣಿಯಲ್ಲ. ಹೀಗಾಗಿ ಆಕಾಶವಾಣಿಗೆ ದೇಶದಲ್ಲಿ ತನ್ನದೇ ಆದ ಘನತೆಯಿದೆ. ಗೌರವವಿದೆ.
ಆಧುನಿಕತೆಯ , ವೇಗದ ಈ ಯುಗದಲ್ಲಿ ಮಾಧ್ಯಮಲೋಕದ ಅಬ್ಬರ ಹೆಚ್ಚಿರಬಹುದು. ನೂರಾರು ನ್ಯೂಸ್ ಚಾನೆಲ್‌ಗಳು ಗಳಿಗೆ ಗಳಿಗೆಗೂ ಸುದ್ಧಿ ಬಿತ್ತರಿಸುತ್ತಿರಬಹುದು. ಮತ್ತು ಇಂದು ರೇಡಿಯೋ ಎಂದಾಗ ಎಫ್.ಎಂ.ಗಳೂ ನೆನಪಿಗೆ ಬರಬಹುದು. ಆದರೆ ಆಕಾಶವಾಣಿ ಅವೆಲ್ಲಕ್ಕಿಂತಲೂ ಒಂದು ಕೈ ಮುಂದಿರುವಂಥದ್ದು. ಇಂದಿಗೂ ರಾಷ್ಟ್ರಪತಿಯವರ ಸಾರ್ವಜನಿಕ ಕಾರ್ಯಕ್ರಮಗಳ ಅಧಿಕೃತ ದಾಖಲೆಯನ್ನು ರಾಷ್ಟ್ರಪತಿಭವನಕ್ಕೆ ತಲುಪಿಸುವ ಗುರುತರವಾದ ಜವಾಬ್ದಾರಿ ಆಕಾಶವಾಣಿಗಿದೆ. ದೇಶದಲ್ಲಿ ಎಲ್ಲೇ ಪ್ರಾಕೃತಿಕ ವಿಕೋಪಗಳಾಗಲೀ,ಅನಾಹುತಗಳಾಗಲೀ ಸಾವು ನೋವುಗಳು ಸಂಭವಿಸಿದಾಗ ಅದರ ಅಧಿಕೃತ ಅಂಕೆಸಂಖ್ಯೆಗಳಿಗಾಗಿ ಸರಕಾರಗಳು ಗಮನಿಸುವುದು ಆಕಾಶವಾಣಿಯನ್ನೇ. ಆಕಾಶವಾಣಿಯೆಂದರೆ ಅಷ್ಟೊಂದು ನಂಬಿಕೆ.ಅಷ್ಟೊಂದು ಗೌರವ.ಅಷ್ಟೊಂದು ಪ್ರೀತಿ. ಅಂಥ ಪ್ರೀತಿ ಗೌರವಗಳು ಜನರಲ್ಲಿ ಇದ್ದುದರಿಂದಲೇ ಮೊದಲೆಲ್ಲಾ ಯೋಧರು ತರುತ್ತಿದ್ದ ಟ್ರಾನ್ಸಿಸ್ಟರ್‌ಗಳನ್ನು ನೋಡಲು ಊರಿಗೆ ಊರೇ ಯೋಧನ ಮನೆಗೆ ಧಾವಿಸುತ್ತಿತ್ತು ಎನ್ನುವ ಕಥೆಗಳು ಹಲವು ಊರುಗಳಲ್ಲಿ ಇಂದಿಗೂ ಪ್ರಚಲಿತವಿದೆ.
ಹೊಸ ಸಹಸ್ರಮಾನದಿಂದೀಚೆಗೆ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ತಮ್ಮ ವ್ಯಾಪ್ತಿಯನ್ನು ದಿಡೀರನೆ ಹೆಚ್ಚಿಸಿಕೊಂಡವು. ಅಹೋರಾತ್ರಿ ಕಾರ್ಯಕ್ರಮಗಳನ್ನು ಬಿತ್ತರಿಸುವ ಜಾಲಗಳೂ ಬಂದವು. ಬ್ರೇಕಿಂಗ್ ನ್ಯೂಸ್‌ಗಳು, ಶೀಘ್ರ ಸುದ್ಧಿ ಕೊಡಬೇಕಾದ ಧಾವಂತಗಳು ಮಾಧ್ಯಮಗಳಲ್ಲಿ ಏಕಾಏಕಿ ಕಂಡುಬಂತು. ಇವುಗಳೆಲ್ಲದರ ನಡುವೆ ಆಕಾಶವಾಣಿ ಸಂಪ್ರದಾಯಬದ್ದವಾಗಿ ನಿಧಾನವಾದರೂ ನಿಖರತೆಗೆ ಪ್ರಧಾನವಾದ ,ಧಾವಂತವಿಲ್ಲದ ,ಸ್ವಪ್ರತಿಷ್ಠತೆಯಿಲ್ಲದೆ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ದೇಶದ ಧ್ವನಿಯೇ ತಾನಾಗಿದ್ದ ಆಕಾಶವಾಣಿ ತನ್ನ ಕೇಳುಗರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದರೂ ಸ್ವತಃ ಮಂಕಾಗಿರಲಿಲ್ಲ. ಏಕೆಂದರೆ ಆಕಾಶವಾಣಿಯ ಕಾರ್ಯವಿಧಾನಕ್ಕೆ ಯಾರೂ ಪೈಪೋಟಿಗೆ ಇಳಿದಿರಲಿಲ್ಲ. ಮನರಂಜನೆಯೊಟ್ಟಿಗೆ ಮನೋವಿಕಾಸ, ಜ್ಞಾನ ಮತ್ತು ಪ್ರಚಾರ ಈ ಮೂರನ್ನೂ ದೇಶಕ್ಕೆ ನೀಡಬಲ್ಲ ಅರ್ಹತೆ ಇದ್ದಿದ್ದು ಕೇವಲ ಆಕಾಶವಾಣಿಗೆ ಮಾತ್ರ. ಆದರೂ ದಿನಗಳೆದಂತೆ ಆಕಾಶವಾಣಿ ಮಂಕು ಮಂಕಾಗಿ ಕಾಣಿಸತೊಡಗಿತು. ಅನಾಥಭಾವವನ್ನು ಆಕಾಶವಾಣಿಯೂ ಅನುಭವಿಸುತ್ತಿದೆಯೇ ಎನಿಸತೊಡಗಿತು. ಆಕಾಶವಾಣಿಯ ನೌಕರವೃಂದ ತಾವು ಮುಖ್ಯವಾಹಿನಿಯ ಮಾಧ್ಯಮರಂಗದಿಂದ ದೂರವಾಗಿರುವ ಕೀಳರಿಮೆಯಿಂದಲೂ , ಕೇಂದ್ರ ಸರಕಾರಿ ನೌಕರರೆಂಬ ದುರಹಂಕಾರದಿಂದಲೂ ವರ್ತಿಸುತ್ತಿದ್ದಾರೇನೋ ಎಂಬಂತೆ ಕಾಣಿಸಿಕೊಂಡರು. ಹೀಗೆ ಕಾಣಲು ದಿವ್ಯ ದೃಷ್ಟಿಯೇನೂ ಬೇಕಾಗಿರಲಿಲ್ಲ.ಏಕೆಂದರೆ ದುರದೃಷ್ಟವಶಾತ್ ಆಯಕಟ್ಟಿನ ಜಾಗಗಳಲ್ಲಿ ಅಂಥವರೇ ವಕ್ಕರಿಸಿಕೊಂಡರು. ಯಾವುದೇ ಕ್ಷೇತ್ರವಿರಲಿ ಅಹಂಕಾರ ಮತ್ತು ಕೀಳರಿಮೆಗಳು ಕಾಣಿಸಿಕೊಂಡರೆ ಅಲ್ಲಿ ಇನ್ನುಳಿದ ಅನಿಷ್ಠಗಳು ಒಳನುಗ್ಗಲು ಕಷ್ಟವೇನಾಗುವುದಿಲ್ಲ. ಜೊತೆಗೆ ದೇಶದ ಜನರಿಗೆ ಆಕಾಶವಾಣಿ ಇನ್ನು ನಮಗೆ ಅನಿವಾರ್ಯವೇನಲ್ಲ ಎನಿಸಿದಾಗ ನಿಲಯದಲ್ಲಿ ಆಲಸ್ಯ ,ಭ್ರಷ್ಟತೆ ,ಒಳಜಗಳ,ರಾಜಕೀಯಗಳು ಸುಲಭವಾಗಿ ನುಸುಳಿಕೊಂಡಿತು. ಹೀಗೆ ಬದಲಾದ ವಿಶ್ವದಲ್ಲಿ ತಾನು ಮಾತ್ರ ಬದಲಾಗಲಾರದ ಅನಿವಾರ್ಯತೆಗಳೆಡೆಯಲ್ಲಿ ಆಕಾಶವಾಣಿಯ ನಡೆ ಮಾತ್ರ ವಿಷಾಧಪೂರ್ಣವಾದುದು. ಇಂದಿನ ಆಕಾಶವಾಣಿಯ ಪರಿಸ್ಥಿತಿ ಹೇಗಿದೆಯೆಂದರೆ ಜನರು ಯಾರನ್ನಾದರೂ ನಂಬಬಹುದು ಮಾರಾಯರೇ ಆದರೆ ಈ ಆಕಾಶವಾಣಿಯನ್ನು ಮಾತ್ರ ನಂಬಲಾಗುವುದಿಲ್ಲ. ಅದರ ಸಹವಾಸವೇ ಬೇಡ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇಕೆ ಹೀಗೆ? ಏನು ನಡೆಯುತ್ತಿದೆ ಅಲ್ಲಿ? ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಮುಂದುವರಿದಾಗ ಎದುರು ನಿಂತ ಆಕಾಶವಾಣಿ ತನ್ನ ಭೀಕರತೆಯನ್ನು ತೋರಿಸುತ್ತಿತ್ತು. ಏಕೆಂದರೆ ಆಕಾಶವಾಣಿಯಲ್ಲಿ ಎಲ್ಲವೂ ಇದೆ. ರಾಜಕಾರಣವಿದೆ. ಜಾತಿವಾದವಿದೆ. ಅನೈತಿಕತೆಯಿದೆ. ಮೇಯುವವರಿಗೆ ಅದು ಇಂದಿಗೂ ಸಮೃದ್ಧ ಗೋಮಾಳವೇ ಸರಿ. ಪ್ರಸ್ತುತ ಚರ್ಚೆಯಾಗುತ್ತಿರುವ ಮಾಧ್ಯಮಗಳ ಭ್ರಷ್ಟಾಚಾರವನ್ನು ಎಲ್ಲಾ ಪೂರ್ವಗ್ರಹವನ್ನು ತ್ಯಜಿಸಿ ವಿಚಾರಮಂಥನ ಮಾಡಿದರೆ ನಮಗೆ ಕಾಣುವುದು ಚಿಲ್ಲರೆ ಬುದ್ಧಿಯ ಹಫ್ತಾಗಳು, ಬ್ಲ್ಯಾಕ್ ಮೈಲ್‌ಗಳು. ಇನ್ನೂ ಮುಂದುವರಿದರೆ ಒಂದಿಷ್ಟು ಪೇಯ್ಡ್ ನ್ಯೂಸುಗಳು ಇತ್ಯಾದಿಗಳು.ಅವೆಲ್ಲವೂ ಕುಸಿದಿರುವ ಮೌಲ್ಯಗಳ ಸಂಕೇತಗಳೇ ಹೌದಾದರೂ ಅದಕ್ಕೆ "ಉದ್ಯಮ" ಎಂಬ ಪಟ್ಟವನ್ನು ಮಾಧ್ಯಮಗಳೇ ಕೊಟ್ಟುಕೊಂಡಿವೆ ಮತ್ತು ಸತಾಯಗತಾಯ ತನ್ನನ್ನು ಸಮರ್ಥಿಸಿಕೊಳ್ಳುತ್ತವೆ. ಆದರೆ ಸರಕಾರಿ ಸ್ವಾಮ್ಯದ ಆಕಾಶವಾಣಿಯ ಹಲವು ಸಿಬ್ಬಂದಿಗಳು ಸಮರ್ಥನೆಗೂ ಅವಕಾಶವಿಲ್ಲದೆ "ಉದ್ಯಮ" ಗಳನ್ನು ನಡೆಸುತ್ತಿರುವುದು ಇಂದು ಗುಟ್ಟಾಗಿ ಉಳಿದಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳು ನೊಣ ತಿಂದು ಕುಲ ಕೆಡಿಸಿಕೊಂಡರೆ , ಆಕಾಶವಾಣಿಯವರು ಆನೆ ತಿಂದರೂ ಕುಲ ಕೆಡಿಸಿಕೊಳ್ಳದೆ "ಪ್ರತಿಷ್ಠಿತ"ರಾಗುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದ ಆಕಾಶವಾಣಿಯ ಎಫ್.ಎಂ ಕೇಂದ್ರವೊಂದಕ್ಕೆ ತನಿಖಾತಂಡವೊಂದು ಧಾಳಿ ನಡೆಸಿತು ಎನ್ನುವಾಗ ಅಲ್ಲಿ ಅದ್ಯಾವ ಪರಿಯ ತಿನ್ನುವಿಕೆ ನಡೆಯುತ್ತಿದ್ದಿರಬಹುದು ಎಂದು ಊಹಿಸಬಹುದು.ಹುಡುಕುತ್ತಾ ಹೊರಟರೆ ದೇಶದುದ್ದಕ್ಕೂ ಆಕಾಶವಾಣಿ ನಿಲಯಗಳಲ್ಲಿ ಕಂಡುಬರುವುದು ಚಿತ್ರವಿಚಿತ್ರವಾದ ಘಟನೆಗಳು ಕಂಡುಬರುತ್ತವೆ. ಅಗರ್ತಲಾದಿಂದ ಮಡಿಕೇರಿಯವರೆಗೂ ರಾಜಕಾರಣಗಳು ನಡೆಯದ ಆಕಾಶವಾಣಿಗಳು ದೇಶದಲ್ಲೇ ಇಲ್ಲ. ಎಲ್ಲೆಲ್ಲೂ ಅಸಹ್ಯಕರ ವಾತಾವರಣದ ಜಾಡುಗಳು. ಇನ್ನು ದೇಶದ ವಾಣಿ ಆಕಾಶವಾಣಿ ಮಂಕಾಗದಿರಲು ಹೇಗೆ ತಾನೆ ಸಾಧ್ಯ?
ಒಂದು ವ್ಯವಸ್ಥೆ ಯ ಸಾಧಕ ಭಾದಕಗಳು ಅದನ್ನು ರೂಪಿಸುವವರನ್ನು ಅವಲಂಬಿಸುತ್ತವೆ. ಇಲ್ಲಿ ಆಕಾಶವಾಣಿಯನ್ನು ಮಂಕಾಗಿಸುವಲ್ಲಿ ಬದಲಾದ ಕಾಲ ಒಂದು ಸಂಗತಿಯಾದರೆ ಅದಕ್ಕೂ ಹೊರತಾದ ಮತ್ತೊಂದು ಸಂಗತಿಯೆಂದರೆ ಆಕಾಶವಾಣಿಯ ನೌಕರವೃಂದವೇ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಅದರ ಅಂದಾಜಾಗುತ್ತದೆ.ರಾಜ್ಯದ ಕೆಲವು ನಿಲಯಗಳ ವ್ಯಾಪ್ತಿಯಲ್ಲಿ ಪ್ರಾದೇಶಿಕ ಭಾಷೆಗಳ ಪ್ರಾಬಲ್ಯವಿದೆ. ಕೊಂಕಣಿ, ತುಳು ಮತ್ತು ಕೊಡವ ಭಾಷಾ ಪ್ರದೇಶದಲ್ಲಿ ಅಕಾಶವಾಣಿ ಕಾರ್ಯಕ್ರಮಗಳ ನೆಪದಲ್ಲಿ ರಾಜಕಾರಣ ಮಾಡುವುದು, ಗುಂಪುಗಾರಿಕೆ ನಡೆಸುವುದು ಸರ್ವೆಸಾಮಾನ್ಯ. ಕೊಡಗಿನಂತಾ ಊರುಗಳಲ್ಲಿ ನಿಧನದ ಸುದ್ಧಿಗಳಿಗೆ ಬೇರೆಡೆಗಿಂತಲೂ ಹೆಚ್ಚಿನ ಮಹತ್ತ್ವವಿದೆ. ಇಂದಿಗೂ ಅಲ್ಲಿ ನಿಧನದ ಸುದ್ಧಿಗಳನ್ನು ತಿಳಿಯಲು ಜನರು ರೇಡಿಯೋದ ಮೊರೆ ಹೋಗುತ್ತಾರೆ. ಆದರೆ ಆಕಾಶವಾಣಿ ಮರಣದ ಸುದ್ಧಿಯಲ್ಲೂ ಕಮಾಯಿ ಮಾಡಲಾರಂಭಿಸಿತು. ಒಂದು ಮರಣದ ಸುದ್ದಿಗೆ ಇಂತಿಷ್ಟು ಎಂದು ದರ ನಿಗದಿಮಾಡಿದರೂ ಸುದ್ಧಿ ಕೊಟ್ಟ ಯಾರಿಗೂ ರಸೀದಿ ಕೊಟ್ಟ ಉದಾಹರಣೆಗಳಿರಲಿಲ್ಲ. ಈ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗುಲ್ಲು ಕೇಳಿಬಂದಾಗ ಆಕಾಶವಾಣಿ ಈ ನಿಧನ ವಾರ್ತೆಯನ್ನು "ಸೇವಾ ಮಾಹಿತಿ"ಎಂದು ಬದಲಾಯಿಸಿತ್ತು. ಬೇಲಿಯೇ ಹೊಲ ಮೇಯ್ದರೆ ಉಳಿಗಾಲವಿದೆಯೇ?
ನಿಲಯದ ನೌಕರರನ್ನು ನೋಡಿದರೇ ಆಕಾಶವಾಣಿಯ ಜಾತಕವನ್ನು ಓದಿಬಿಡಬಹುದು. ಬಹುತೇಕ ಆಕಾಶವಾಣಿಯ ಉದ್ಯೋಗಸ್ಥರ ಮುಖದಲ್ಲಿ ಕೆಲಸವಿಲ್ಲದೆ ಅಲೆದ ದಣಿವೇ ಕಾಣಸಿಗುತ್ತದೆ. ಸರಕಾರಕ್ಕೆ ಮೋಸಮಾಡಿ ಕೆಲಸ ತಪ್ಪಿಸಿಕೊಂಡ ಲಕ್ಷಣಗಳು ನಿಚ್ಚಳವಾಗಿ ಗೋಚರಿಸುತ್ತದೆ. ವಿಶೇಷವೆಂದರೆ ಇವರೆಲ್ಲರೂ ೪೦ ರಿಂದ ೭೫ ಸಾವಿರ ರೂಪಾಯಿ ಸಂಬಳ ಪಡೆಯುವವರು. ಆಕಾಶವಾಣಿಯಲ್ಲಿ ಹೆಚ್ಚಿನ ಸಂಬಳ ಪಡೆಯುವವರೆಂದರೆ ಉತ್ಸವ ಮೂರ್ತಿಗಳೆಂದೇ ಅರ್ಥ. ಆದರೆ ಉದ್ಘೂಷಕರು ಮತ್ತು ಡಿ.ಗುಂಪಿನ ನೌಕರರು ನಿವೃತ್ತರಾಗುವವರೆಗೂ ತಿಂಗಳ ಕೊನೆಯಲ್ಲಿ ಸಾಲಮಾಡದೆ ಬದುಕಲಾರದಷ್ಟು ವೇತನ ತಾರತಮ್ಯವಿದೆ. ಇಂದು ನಿಲಯದಲ್ಲಿ ಕಾರ್ಯಕ್ರಮಗಳ ಜಾಡನ್ನು ಹಿಡಿದು ಹೋಗುವವರಿಲ್ಲ. ರಿಸರ್ಚ್ ಮತ್ತು ಡೆವಲಪ್ ಮೆಂಟ್ ಎನ್ನುವುದು ಕಡ್ಡಾಯವಾದರೂ ಕೊಲೆಸ್ಟ್ರಾಲ್ ಹೆಚ್ಚುವಷ್ಟು ಸಂಬಳ ಬರುವುದರಿಂದ ಮತ್ತು ಕೇಳುವ ದೊಣ್ಣೆನಾಯಕರಾರೂ ಇಲ್ಲದಿರುವುದರಿಂದ ಹೆಚ್ಚಿನ ನಿಲಯದ ಸಿಬ್ಬಂದಿಗಳು ಹುಡುಕಾಟಕ್ಕಿಳಿಯುವುದಿಲ್ಲ. ಎಲ್ಲವೂ ಕಣ್ಣಳತೆಯ ,ಕೂಗಳತೆಯ ದೂರದಲ್ಲಿ ಸಿಗಬೇಕು. ಅಧಿಕಾರಿಗಳ ಗೆಳೆಯರಿಗೋ ನಂಟರಿಗೋ ಹಾಡುಗಳು ಗೊತ್ತಿದ್ದರೂ ಸಾಕು ಅವರು ಆಸ್ಥಾನ ಕಲಾವಿದರಾಗುವರು. ಇನ್ನು ಆಕಾಶವಾಣಿಯಲ್ಲಿ ವಾರ್ತೆಗಳನ್ನು ಓದುತ್ತಿರುವವರು ಮನುಷ್ಯರಾಗಿದ್ದರೆ ಅಷ್ಟೆ ಸಾಕು. ಭಾಷೆಯ ಮನೆ ಹಾಳಾದರೂ ಚಿಂತೆ ಇಲ್ಲ. ಇಂದು ಆಕಾಶವಾಣಿಯಿಂದ ಯಾರೂ ಬ್ರೇಕಿಂಗ್ ನ್ಯೂಸ್‌ಗಳನ್ನು ನಿರೀಕ್ಷಿಸುವುದಿಲ್ಲ. ಆದರೆ ಸುದ್ಧಿಗಳಾದರೂ ಅಪರೂಪವೂ ಮೌಲಿಕವೂ ಆಗಿರಬೇಡವೇ? ವ್ಯಕ್ತಿ ಬದಲಾಗದೆ ವ್ಯವಸ್ಥೆ ಬದಲಾಗದು ಎಂಬ ಮಾತಿದೆ. ಅದು ಆಕಾಶವಾಣಿಗೆ ಚೆನ್ನಾಗಿ ಅನ್ವಯವಾಗುತ್ತದೆ. ವರ್ಗವಾಗುವ ಅಧಿಕಾರಿ ನಿಲಯದಿಂದ ಹಳೆಯ ರೆಕಾರ್ಡುಗಳನ್ನು ಕದ್ದೊಯ್ದು ಇನ್ನೊಂದು ನಿಲಯದಿಂದ ತನ್ನದೇ ಕಾರ್ಯಕ್ರಮ ಎಂದು ಪ್ರಸಾರ ಮಾಡುವುದು, ಖ್ಯಾತನಾಮರ ಭಾಷಣಗಳನ್ನೇ ಕದ್ದೊಯ್ಯುವುದು ಆಕಾಶವಾಣಿಯಲ್ಲಿ ನಡೆಯುತ್ತಲೆ ಇರುತ್ತದೆ ಎಂಬ ಸುದ್ಧಿಯಿದೆ. ಇವೆಲ್ಲವೂ ದೇಶದ ಆಸ್ತಿಗಳು ಎಂಬುದು ಗಮನಾರ್ಹ. ಹಾಗಾದರೆ ನಿಲಯದಲ್ಲಿ ಶಿಸ್ತು , ನಿಯಮಗಳು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿರಬಹುದು?
ಸುಮಾರು ಇಪ್ಪತ್ತು ವರ್ಷಕ್ಕೆ ಹಿಂದೊಮ್ಮೆ ಆಕಾಶವಾಣಿಯ ಉದ್ಘೋಷಕಿಯೊಬ್ಬರು ರಜಾದಿನದಲ್ಲಿ ಸಾರ್ವಜನಿಕರಿಗೆ ಹರಿಕಥೆ ನಡೆಸಿಕೊಟ್ಟರು ಎಂದು ಅವರಿಗೆ ನೋಟಿಸ್ ಕಳುಹಿಸಲಾಗಿತ್ತಂತೆ .ಆದರೆ ಇಂದು ಒಬ್ಬ ನಿಲಯದ ಮನುಷ್ಯ ವೆಬ್‌ಸೈಟೊಂದನ್ನು ನಡೆಸುತ್ತಾ ಪತ್ರಿಕೆಗಳಿಗೆ ಅಂಕಣವನ್ನೂ ಬರೆಯುತ್ತಾ ಲೋಕಕ್ಕೆ ದೊಡ್ಡವರಂತೆ ಪೋಸು ಕೊಡುತ್ತಿದ್ದರೂ ಆಕಾಶವಾಣಿಗೆ ಅದರ ಪರಿವೆಯಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವಂತೆ ಜಾತಿನಿಂದನೆಯ ಕೇಸುಗಳು, ಸ್ಥಳಿಯ ಸೊಗಡಿನ ಬಗ್ಗೆ ಅರಿವು ಮತ್ತು ಆಸಕ್ತಿ ಇಲ್ಲದಿರುವುದು, ವೃತ್ತಿ ಮತ್ಸರ ,ದೇಶಾದ್ಯಂತದ ನಿಲಯಗಳಲ್ಲಿ ಕಂಡುಬರುತ್ತಿರುವ ಕ್ರಿಶ್ಚಿಯನ್ ಲಾಭಿ, ತಮ್ಮ ಅಂಕಣಕ್ಕಾಗಿ ಆಕಾಶವಾಣಿಯ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರೇ ತುಂಬಿರುವಾಗ ಯಾವ ಬಾಯಿ ಯಿಂದ ಆಕಾಶವಾಣಿ ದೇಶದ ವಾಣಿ ಎಂದು ಕರೆಯೋಣ.
ಎಲ್ಲೇ ಅನಾಚಾರಗಳು ನಡೆದರೂ ಒಂದು ಹದ್ದಿನ ಕಣ್ಣಿಡುವ ಶ್ರೀನಿವಾಸ ಕುಂಡಂತಾಯರು ಒಂದು ಕಥೆಯನ್ನು ಹೇಳುತ್ತಿರುತ್ತಾರೆ.
ಮಂಗಳೂರಿನ ಹೊರವಲಯದಲ್ಲಿ ಒಂದು ದೊಡ್ಡ ಹುಲ್ಲುಗಾವಲಂತೆ. ಅಣ್ಣಪ್ಪನ ಅಗರು ಎಂಬ ಹೆಸರಂತೆ. ಸುತ್ತಲ ಊರವರಿಗೆ ದನ ಮೇಯಿಸಲು, ಹುಲ್ಲು ಕತ್ತರಿಸಲು ಅದು ಪ್ರಶಸ್ತ ಜಾಗವಂತೆ. ಗೋವಿಗೆ ಎಲ್ಲೇ ಹುಲ್ಲಿಗೆ ಕೊರತೆಯಿದ್ದರೂ ಅಣ್ಣಪ್ಪನ ಅಗರಿನಲ್ಲಿ ಕೊರತೆಯಿರದಂತೆ.ಹಾಗಾಗಿ ಮೇಯಲು ಎಲ್ಲೆಲ್ಲಿಂದಲೋ ಗೋವುಗಳು ಬರುವುದಂತೆ. ಮೈದಾನದ ತುಂಬಾ ಗೋವುಗಳೋ ಗೋವುಗಳು ತುಂಬಿರುತ್ತಿದ್ದುವಂತೆ. ಕುಂಡಂತಾಯರಿಗೆ ದೇಶದೆಲ್ಲೆಡೆಯ ಆಕಾಶವಾಣಿ ನಿಲಯಗಳನ್ನು ನೋಡುವಾಗಲೆಲ್ಲಾ ಅದೇ ಅಣ್ಣಪ್ಪನ ಅಗರು ನೆನಪಾಗುವುದಂತೆ.

Tuesday, October 4, 2011

ಜಗತ್ತೇ ಜಾಹೀರಾತಿನ ಬುಟ್ಟಿ: ಜಗತೀಕರಣಕ್ಕೆ ಇನ್ನಾವ ಅಡ್ಡಿ?


೯೦ರ ದಶಕದಲ್ಲಿ ಜಗತ್ತು ಮಹಾನ್ ಸ್ಥಿತ್ಯಂತರಕ್ಕೆ ಒಳಪಟ್ಟಾಗ ಮೊದಲು ಕಣ್ಣಿಗೆ ಕಂಡಿದ್ದು ಆರ್ಥಿಕತೆ ಎಂಬ ಕೆರಳಿದ ಗೂಳಿ. ಅನಂತರ ಈ ಸ್ಥಿತ್ಯಂತರ ಆರ್ಥಿಕತೆಗೆ ಮಾತ್ರ ಸೀಮಿತವಾದುದಲ್ಲ ಎಂಬುದನ್ನು ಜಗತ್ತು ಬಹುಬೇಗ ಅರ್ಥಮಾಡಿಕೊಂಡಿತು. ಈ ಸ್ಥಿತ್ಯಂತರ ಅಡುಗೆ ಮನೆಯಿಂದ ಹಿಡಿದು ಷೇರು ಮಾರುಕಟ್ಟೆಯವರೆಗೆ ,ಕಿಂಡರ್ ಗಾರ್ಡನ್‌ನಿಂದ ಹಿಡಿದು ಯುನಿವರ್ಷಿಟಿಯವರೆಗೆ, ದಿನಸಿ ಅಂಗಡಿಗಳಿಂದ ಹಿಡಿದು ಕಾಣದ ಧಣಿಗಳ ಎಂ.ಎನ್.ಸಿಗಳ ವರೆಗೆ ಅದರ ಬಾಹುಗಳು ವ್ಯಾಪಿಸಿ ಕಾವೇರಿ ತಟದ ಬೋರೇಗೌಡನೂ ಅಮೇಜಾನ್ ತೀರದ ಟಾಮ್-ಡಿಕ್-ಹ್ಯಾರಿಗಳೆಲ್ಲರೂ ಒಂದೇ ಏಟಿಗೆ ತತ್ತರಿಸಿಹೋಗಿದ್ದರು. ಒಟ್ಟಿಗೇ ಸಾವರಿಸಿಕೊಂಡಿದ್ದರು. ಎಲ್ಲೆಲ್ಲೂ ಪ್ರವಾಹಕ್ಕೆ ವಿರುದ್ಧವಾಗಿ ಈಜಲು ಹೋದವರು ಒಂದೇ ತೆರನಾಗಿ ಮುಳುಗಿಹೋಗಿದ್ದರು. ಹೀಗೆ ಕದಡಿದ ವಿಶ್ವ ತಿಳಿತಿಳಿಯಾಯಿತು ಎಂದುಕೊಂಡಾಗ ಎಲ್ಲವೂ ಬದಲಾಗಿಹೋಗಿದ್ದವು. ಬೀದಿಗಳು ಬದಲಾಗಿದ್ದವು. ಮನುಷ್ಯ ವರ್ತನೆಗಳು ಬದಲಾಗಿದ್ದವು. ಕೆಲಸಗಳು ಬದಲಾದವು. ಬುದ್ದಿಗಳು ಬದಲಾಗಿದ್ದವು. ಎಲ್ಲವೂ ವ್ಯವಹಾರ. ಶುದ್ಧ ವ್ಯವಹಾರಗಳು ಎಲ್ಲೆಡೆ ವ್ಯಾಪಿಸಿದ್ದವು. ಇದ್ದದ್ದನ್ನು ಅಳಿಸಿಹಾಕಲು ಇಷ್ಟು ಸಾಕಲ್ಲ? ಈ ರೀತಿ ಬದಲಾದ ಪರಿಸ್ಥಿತಿಗೆ ವಿಧ್ವಾಂಸರು ಜಾಗತಿಕರಣ ಎಂಬ ಹೆಸರನ್ನು ಕೊಟ್ಟುಕೊಂಡರೂ ಬದಲಾದ ವಿಶ್ವಕ್ಕೆ ಮರುನಾಮಕರಣವಾಗಲಿಲ್ಲ.
ಇಂಥ ಪರಿಸ್ಥಿತಿಯ ಬಗ್ಗೆ ಜಗತ್ತಿನಲ್ಲಿ ಹಲವು ಸಾಹಿತ್ಯಗಳು ಒಮ್ಮೆಲೆ ಬಂದವು. ಅವು ದಿಗ್ಭ್ರಾಂತಿಯಿಂದ ಸೃಷ್ಟಿಯಾದ ಸಾಹಿತ್ಯಗಳು. ಏಕೆಂದರೆ ಆರ್ಥಿಕ ಧಾತುವಿನಿಂದ ಉಂಟಾದ ಸ್ಥಿತ್ಯಂತರ ಸಮಾಜವನ್ನು ಒಂದೇ ಸಮನೆ ಬದಲು ಮಾಡುತ್ತಿತ್ತು. ಇದನ್ನು ಪಾಶ್ಚಾತ್ಯ ವಿಧ್ವಾಂಸರು ಹಲವು ಕೋನಗಳಲ್ಲಿ ಸೆರೆಹಿಡಿದಿದ್ದಾರೆ. ಸರ್ವಕ್ಷೇತ್ರಗಳಿಂದಲೂ ಜಾಗತೀಕರಣದ ಸ್ವರೂಪವನ್ನೂ ಪರಿಣಾಮವನ್ನೂ ವಿಮರ್ಶಿಸಿದ್ದಾರೆ. ಜಗತ್ತೇ ಒಂದು ಜಾಹೀರಾತಿನ ಬುಟ್ಟಿಯಾಗಿರುವಾಗ ಅದನ್ನು ಮುಟ್ಟದೇ ತಾನೇ ಹೇಗಿರುವುದು? ಈ ನೆಲೆಯಲ್ಲಿ ಬಂದ ಹಲವಾರು ಪುಸ್ತಕಗಳಲ್ಲಿ ಒಂದು ಪುಸ್ತಕ ಅಲೆನ್ ಬೈರ್ನರ್ ಎಂಬಾತ ಬರೆದ ಸ್ಪೋರ್ಟ್ಸ್, ನೇಶನಲಿಸಂ, ಗ್ಲೋಬಲೈಸೇಶನ್ ; ಯುರೋಪಿಯನ್ ಅಂಡ್ ನಾರ್ಥ್ ಅಮೆರಿಕನ್ ಪರ್ಸ್ ಪೆಕ್ಟಿವ್ ಎಂಬ ಪುಸ್ತಕ. ಈ ಅಲೆನ್ ಬೈರ್ನರ್ ಎಂಬಾತ ಉತ್ತರ ಐರ್ಲೆಂಡ್ ನವನಂತೆ. ಆತ ಜೋರ್ಡಾನ್ ಟೌನ್ ಎಂಬಲ್ಲಿನ ಯುನಿವರ್ಷಿಟಿ ಆಫ್ ಅಲ್ಷ್ಟರ್ ನಲ್ಲಿ ಕ್ರೀಡೆ ಮತ್ತು ಅನ್ವಯಿಕ ವೈದ್ಯ ಶಾಸ್ತ್ರದ ಪ್ರೊಫೇಸರನಂತೆ. ಓದುಗರಿಗೆ ಇದೊಂದು ವಿಲಕ್ಷಣ ಪುಸ್ತಕದಂತೆನಿಸುತ್ತದೆ. ಕ್ರೀಡಾ ಜಗತ್ತಿನ ಮತ್ತೊಂದು ಲೋಕವನ್ನು ನೋಡುತ್ತಾ ಹೋಗುವಾಗ ವಿಲಕ್ಷಣತೆಯೇ ಮೊದಲು ಎದುರಾಗುವ ಆಗಂತುಕ ಎಂಬ ವಾಸ್ತವದೊಂದಿಗೆ ಇದರ ವಾಚನವನ್ನು ಆರಂಭಿಸಬೇಕು. ಕ್ರೀಡೆಯನ್ನು ಮೀಮಾಂಸಕ ದೃಷ್ಟಿಯಿಂದ ನೋಡಬೇಕಾದ ಸಂಬಂಧಕ್ಕೂ ಸಿದ್ದವಾಗಿರಬೇಕು. ಆದರೆ ಇಲ್ಲಿನ ಯಾವ ಸಂಗತಿಯನ್ನೂ ಅಪ್ರಸ್ತುತ , ಅವೈಜ್ಞನಿಕ ಎನ್ನುವ ಹಾಗಿಲ್ಲ. ಕ್ರೀಡೆ,ರಾಷ್ಟ್ರೀಯತೆ ಮತ್ತು ಜಾಗತೀಕರಣ ಈ ಮೂರು ಭಿನ್ನ ಭಿನ್ನ ನೆಲೆಯ ಬೇರೆ ಬೇರೆ ಸಂಗತಿಗಳು. ಪ್ರತ್ಯೇಕ ಪ್ರತ್ಯೇಕವಾಗಿ ನೋಡಿದರೆ ಅವವು ಮಹತ್ತ್ವದ ಸಂಗತಿಗಳೇ. ತನ್ನ ಹಾದಿಯಲ್ಲಿ ತಾನು ಪಯಣಿಸುವ ಪ್ರತ್ಯೇಕ ಹಳಿಗಳ ರೈಲುಗಳಂತೆ. ಆದರೆ ಈ ಮೂರನ್ನು ಜಾಗತೀಕರಣದ ಸಂದರ್ಭದಲ್ಲಿ ನೋಡಿದಾಗ ಅವು ಪರಸ್ಪರ ಅವಿನಾಭಾವಿಯೂ ಪೂರಕವಾದದೂ ಎಂದು ತಿಳಿಯುತ್ತದೆ. ಅಂದರೆ ಈ ಮೂರರ ಒಳಗೂ ಒಂದು ಸಮಾಜ, ಒಂದು ಜನಾಂಗ, ಒಂದು ಇತಿಹಾಸ, ಒಂದು ಪರಿಸ್ಥಿತಿ, ಒಂದು ಅವಸ್ಥೆ ಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಪುಸ್ತಕ ಕೂಡ ಇಂಥ ಸಂಗತಿಗಳನ್ನೇ ಬಿಚ್ಚಿಡುತ್ತಾ ಸಾಗುತ್ತದೆ.
ಕ್ರೀಡೆ ಮನುಷ್ಯನ ಚೈತನ್ಯ. ಅಥವಾ ಇನ್ನಾವುದೋ ಹೆಸರಿನ ಅಂತರಂಗದ ಪುಟಿತ. ಅಥವಾ ಮನೋರಂಜನೆಯ ಪ್ರಕಟೀಕರಣದ ಒಂದು ಮಾಧ್ಯಮ. ಅಥವಾ ಬಿಡುಗಡೆಯ ಮಾರ್ಗ. ಆಹಾರ ನಿದ್ರೆಗಳಂತೆ ಕ್ರೀಡೆಗಳಿಗೆ ಒಡ್ಡಿಕೊಳ್ಳದ ಮನುಷ್ಯನಿರಲಿಕ್ಕಿಲ್ಲ. ಒಡ್ಡಿಕೊಂಡಿಲ್ಲವೆಂದರೆ ಆತ ಮನುಷ್ಯನೇ ಅಲ್ಲ. ಕ್ರೀಡೆ ಮನುಷ್ಯನ ಸಹಜ ಬಯಕೆ. ವ್ಯಕ್ತಿ ಬೆಳೆದಂತೆ ಕ್ರೀಡೆ ಕೂಡ ಬೆಳೆಯುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಸಮುದಾಯವಾಗುತ್ತಾ ಹೋದಂತೆ ವ್ಯಕ್ತಿ ಕ್ರೀಡೆಯನ್ನು ಪ್ರೀತಿಸುತ್ತಾ ಹೋಗುತ್ತಾನೆ. ಈ ಪ್ರೀತಿಸುವಿಕೆ ಅಪ್ಪಟ ಭಾವನಾತ್ಮಕತೆ. ಅದು ಉದ್ದೀಪನ ಮತ್ತು ಪ್ರಚೋದಕ ಗುಣವುಳ್ಳದ್ದು. ಆದ್ದರಿಂದ ವಿಷಯವಿರುವುದೇ ಇಲ್ಲಿ. ಹಾಗೆಯೇ ರಾಷ್ಟ್ರೀಯತೆಯೆಂಬುದೂ ಕೂಡ. ಸಿದ್ಧಾಂತಗಳ ಚೌಕಟ್ಟು ಇರಲಿ ಅಥವಾ ಇಲ್ಲದಿರಲಿ ರಾಷ್ಟ್ರೀಯತೆಯ ಮೂಲ ತುದಿಯನ್ನು ಹುಡುಕಿದಾಗ ಅಲ್ಲಿ ಭಾವನಾತ್ಮಕತೆಗಳಿಲ್ಲದೇ ಇರುವುದಿಲ್ಲ. ಮತ್ತು ಆ ಭಾವುಕತೆಯ ಮತ್ತೊಂದು ತುದಿ ಭ್ರಹತ್ತಾಗಿ ಬೆಳೆದು ವಿಶಾಲ ವ್ಯಾಪ್ತಿಯನ್ನು ಬೆಳೆಸಿಕೊಂಡಿರುವುದನ್ನು ಕಾಣುತ್ತೇವೆ. ಕ್ರೀಡೆಯಂತೆ ರಾಷ್ಟ್ರೀಯತೆ ಕೂಡ ಸಾಮುದಾಯಿಕವಾಗಿ ಅತ್ಯಂತ ಪ್ರಬಲ ಸಂಗತಿ. ಅದೂ ಕೂಡ ಉದ್ದೀಪಕ, ದಿಕ್ಕು ತಪ್ಪಿದರೆ ಪ್ರಚೋದಕ. ಎರಡಕ್ಕೂ ಭಾವನೆಗಳೇ ಮೂಲಬೇರುಗಳು. ಹೀಗೆ ಕ್ರೀಡೆ ಮತ್ತು ರಾಷ್ಟ್ರೀಯತೆಗಳು ತಾವು ಪರಸ್ಪರ ಎದುರಾಗುವುದಕ್ಕೂ ಮುನ್ನವೇ ಬಾಧರಾಯಣ ನಂಟಸ್ಥನವೊಂದನ್ನು ಹೊಂದಿರುತ್ತದೆ. ಹಾಗಾದರೆ ಅವೆರಡೂ ಒಗ್ಗೂಡಿದಾಗ...? ಹೀಗೊಂದು ಸಮ್ಮಿಲನ ವಿಶ್ವದ ಹಲವು ಇತಿಹಾಸವನ್ನು ನಿರ್ಮಿಸಿದ್ದಿದೆ. ಕ್ರೀಡೆ ಗಡಿರೇಖೆಗಳ ಹಂಗಿಲ್ಲದೆ, ಯುದ್ದರಂಗಕ್ಕೆ ಧಾವಿಸದೆ, ಅಧಿಕಾರವನ್ನು ನಡೆಸದೆ, ಕಿರೀಟಗಳ ಹಂಗಿಲ್ಲದೆ, ಸಮಾಜವನ್ನು ಒಗ್ಗೂಡಿಸಬಲ್ಲದು ಎಂಬುದನ್ನು ಕೂಡ ಜಗತ್ತು ಗಮನಿಸಿದೆ. ಕೇವಲ ಭಾವನಾತ್ಮಕ ಪರಿಕಲ್ಪನೆಯೊಂದು ತತ್ತ್ವ ಸಿದ್ಧಾಂತಗಳ ಹುಟ್ಟಿಗೆ ನಾಂದಿಯಾಗಬಹುದು ಎಂಬುದನ್ನು ಕಂಡಿದ್ದೇವೆ. ಅದು ಕ್ರೀಡೆಯ ಗುಣ. ಹೀಗೆ ಪರಸ್ಪರ ಪೂರಕವಾಗಿರುವ ಸಂಗತಿಗಳು ಅಪಾಯಕರವೂ ಆಗಿರುತ್ತವೆನ್ನುವುದನ್ನೂ ಹೇಳಲು ಅಲೆನ್ ಬೈರ್ನರ್ ಮರೆಯುವುದಿಲ್ಲ. ಯುರೋಪಿನ ಮತ್ತು ಅಮೇರಿಕಾ ಖಂಡಗಳ ಕ್ರೀಡಾ ಇತಿಹಾಸವನ್ನು ಉಲ್ಲೇಖಿಸುವ ಅವರು ಆಯಾಯ ದೇಶಗಳ ರಾಷ್ಟ್ರೀಯತೆ ಮತ್ತು ಕ್ರೀಡಾಗುಣಗಳನ್ನು ಉದಾಹರಿಸುತ್ತಾರೆ. ವಿ ಹೇಟ್ ಇಂಗ್ಲೆಂಡ್ ಎನ್ನುತ್ತಲೇ ಕ್ರೀಡಾಂಗಣಕ್ಕಿಳಿಯುವ ಸ್ಕಾಟ್‌ಲ್ಯಾಂಡ್ ಆಟಗಾರರ ಮಾನಸಿಕತೆಯನ್ನೂ ರಾಷ್ಟ್ರೀಯತೆಯ ಹಂಗಿಲ್ಲದ ಕ್ಲಬ್ ತಂಡಗಳ ಬಗ್ಗೆಯೂ ಹೇಳುತ್ತಾರೆ. ಅಂತಿಮವಾಗಿ ಅವರ ಆಶಯವೆಂದರೆ ಜಾಗತೀಕರಣದ ಸಂದರ್ಭದಲ್ಲಿ ಈ ಎಲ್ಲಾ ಸಂಗತಿಗಳು ದಿಕ್ಕು ತಪ್ಪುತ್ತಿವೆ ಎನ್ನುವುದು. ಒಂದೇ ಮೂಲಧಾತುಗಳ ನ್ನು ಹೊಂದಿರುವ ಎರಡು ಸಂಗತಿಗಳು ತಮ್ಮ ಧ್ಯೆಯೋದ್ಧೇಶವನ್ನು ಮರೆತಿವೆ ಮತ್ತು ಜಾಗತೀಕರಣ ಕ್ರೀಡಾ ತತ್ತ್ವವನ್ನು ಮರೆಮಾಚಿಬಿಟ್ಟಿದೆ ಎಂಬ ಅಭಿಪ್ರಾಯ ಅಲೆನ್ ಬೈರ್ನರ್ ಅವರದ್ದು.
ಯುರೋಪು ಮತ್ತು ಅಮೆರಿಕಾಗಳ ಸಂಗತಿ ಹಾಗಿರಲಿ. ಕ್ರೀಡೆಗೇಕೆ ಸಿದ್ದಾಂತಗಳ ಚೌಕಟ್ಟುಗಳು ಎಂಬ ಅಭಿಪ್ರಾಯ ಬರುವ ಹೊತ್ತಿಗೆ ಕಪಿಲ್ ದೇವ್‌ನ ಭಾಷಣ ನೆನಪಾಗುತ್ತವೆ.ನಿಜಕ್ಕೂ ಏನು ತಪ್ಪಿತ್ತು ಕಪಿಲನ ಭಾಷಣದಲ್ಲಿ?ಭಾರತೀಯ ಕ್ರಿಕೆಟ್ ತಂಡದ ಇಂಗ್ಲೆಂಡ್ ತಂಡದ ಪ್ರವಾಸದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿಯನ್ನು ಪ್ರಾಮಾಣಿಕ ಕ್ರೀಡಾಭಿಮಾನಿಯೊಬ್ಬ ಒಪ್ಪಬಹುದೇ? ತೆಂಡೂಲ್ಕರನ ೧೦೦ನೇ ಶತಕದ ಮುಂದೆ ತಂಡದ ಪ್ರದರ್ಶನವೇ ಗೌಣವಾಗುವುದಾದರೆ ಇದೆಂಥಾ ಕ್ರೀಡೆ? ಎಂಥಾ ಅಭಿಮಾನ? ತೆಂಡೂಲ್ಕರ ಅದೆಷ್ಟೇ ಮಹಾನ್ ಆಟಗಾರನಿರಬಹುದು. ಆದರೆ ತಂಡದೊಳಗೆ ಆತನೂ ಒಬ್ಬ ಸದಸ್ಯ. ತಂಡವಿಲ್ಲದೆ ತೆಂಡೂಲ್ಕರನಿಲ್ಲ. ಆದರೆ ತೆಂಡೂಲ್ಕರನಿಲ್ಲದೆಯೂ ತಂಡವಿರಬಹುದು ಎಂಬುದು ಸಾಮಾನ್ಯವಾದ ಅಭಿಪ್ರಾಯವಲ್ಲವೇ? ಕ್ರೀಡೆಯಲ್ಲಿ ವ್ಯಯಕ್ತಿಕ ಅಂಕಿ ಅಂಶಗಳೇ ಕ್ರೀಡೆಗಳಿಗಿಂತ ಶ್ರೇಷ್ಠವಾಗುವುದರ ಹಿಂದೆ ಅಲೆನ್ ಬೈರ್ನರನ ವಾದವಿದೆ. ಜಾಗತೀಕರಣದ ನೆರಳಿದೆ. ಅಷ್ಟಕ್ಕೂ ಭಾರತದಲ್ಲಿ ಕ್ರಿಕೇಟು ಇಷ್ಟೊಂದು ಅಬ್ಬರದಿಂದ ನಿಲ್ಲಲಾರಂಭಿಸಿರುವುದು ಇದೇ ಜಾಗತೀಕರಣದ ಅನಂತರವೇ. ಸಭ್ಯರ ಆಟವಾಗಿದ್ದ ಕ್ರಿಕೇಟು ಇಂದು ಎಲ್ಲಾ ಹುಳುಕುಗಳನ್ನು ಹೊತ್ತುಕೊಂಡಿರುವುದಕ್ಕೆ ಜಾಗತೀಕರಣವನ್ನು ದೂರದೆ ವಿಧಿಯಿಲ್ಲ. ಏಕೆಂದರೆ ಜಗತ್ತೇ ಜಾಹಿರಾತಾಗುವ ಕಾಲದಲ್ಲಿ ಕ್ರಿಕೆಟ್ ಗೆಲ್ಲುವ ಕುದುರೆ. ಅಲೆನ್ ಬೈರ್ನರನ ವಾದವೆಷ್ಟು ಪ್ರಸ್ತುತವೆಂದು ಸಾಭೀತುಪಡಿಸಲು ಕ್ರಿಕೆಟ್ ಒಂದೇ ಸೋದಾಹರಣ ಉದಾಹರಣೆಯಾಗಿ ನಿಲ್ಲಬಲ್ಲದು. ಏಕೆಂದರೆ ಕ್ರಿಕೆಟ್ ದೇಶವೊಂದರ ಧರ್ಮವಾಗುತ್ತದೆ. ಆಟಗಾರ ದೇವರಾಗುತ್ತಾನೆ. ಕೃಷಿ ಮಂತ್ರಿ ಕ್ರಿಕೆಟ್ ಮಂತ್ರಿಯಾಗುತ್ತಾನೆ. ಊಟಕ್ಕಿಲ್ಲದ ಬಾಂಗ್ಲಾ-ಕಿನ್ಯಾಗಳು ಹುಚ್ಚೆದ್ದು ಕ್ರಿಕೆಟನ್ನು ಆರಾಧಿಸುತ್ತದೆ. ರಕ್ತಪಾತವಾಗುವ ಸಿಲೋನು ಆಟಗಾರರನ್ನು ರಾಜಭವನದಲ್ಲಿ ಸಮ್ಮಾನಿಸುತ್ತದೆ. ಆಟಗಾರನೊಬ್ಬನ ಹೇಳಿಕೆಯನ್ನು ಸರಕಾರ ಕೂಡ ಶ್ರದ್ದೆಯಿಂದ ಆಲಿಸುತ್ತದೆ. ಇದ್ದ ಬದ್ದ ಕ್ರೀಡೆಗಳನ್ನು ಅದು ನುಂಗಿ ನೀರು ಕುಡಿಯುತ್ತದೆ. ಶ್ರೀಮಂತಿಕೆಯ ಅಮಲು, ಅದರಿಂದುಂಟಾಗುವ ಹುನ್ನಾರಗಳೆಲ್ಲವೂ ಇಂದೂ ಕ್ರಿಕೆಟನ್ನು ಸಭ್ಯರ ಆಟವಾಗಿಟ್ಟಿಲ್ಲ. ತೆರಿಗೆ ಕಟ್ಟದ ಆಟಗಾರ ಎಷ್ಟೇ ಸೆಂಚುರಿ ಬಾರಿಸಿದರೆ ತಾನೇ ಏನು? ಜಾಳುಜಾಳಾಗಿ ಸಾಗುವ ಅಲೆನ್ ಅವರ ಪುಸ್ತಕ ಸುಲಭವಾಗಿ ಅರ್ಥವಾಗದಿದ್ದರೂ ಕ್ರಿಕೆಟ್ ಎಂಬುದು ಅರ್ಥವಾದರೆ ಕ್ರೀಡೆ-ರಾಷ್ಟ್ರೀಯತೆ ಮತ್ತು ಜಾಗತೀಕರಣ ಗಳ ಬಾದರಾಯಣ ಸಂಬಂಧ ಸುಲಭವಾಗಿ ಅರ್ಥವಾಗುತ್ತದೆ. ಜಗತ್ತೇ ಜಾಹೀರಾತುಗಳ ಬುಟ್ಟಿಯಾಗಿರುವಾಗ ಜಾಗತೀಕರಣಕ್ಕೆ ಬೇರೆ ವ್ಯಾಖ್ಯಾನಗಳು ಬೇಕೇ?