Wednesday, September 7, 2011

ಆಲೀರ ಮನೆಯಲ್ಲಿ ಅವಿತುಕೊಂಡ ಚರಿತ್ರೆ


ಡಿಕೇರಿ-ನಾಗರಹೊಳೆ ಹೆದ್ದಾರಿಯಲ್ಲಿ ೬೦ ಕಿಮೀ ದೂರ ಸಾಗಿದರೆ ಪೊನ್ನಂಪೇಟೆ ಎಂಬ ಪುಟ್ಟ ಪಟ್ಟಣವೊಂದು ಎದುರಾಗುತ್ತದೆ.ಅಲ್ಲಿಂದ ಮೂರೇಮೂರು ಕಿ.ಮೀ ದೂರದಲ್ಲಿ ತನ್ನ ಪಾಡಿಗೆ ತಾನು ಹೊದ್ದುಕೊಂಡಂತಿರುವ ಒಂದು ಪುಟ್ಟ ಊರು ಚೇನಿವಾಡ. ಅದರ ಒಂದು ಭಾಗ ಮಾಪಿಳ್ಳೆತೋಡು. ಮಾಪಿಳ್ಳೆಗಳೇ ವಾಸವಿರುವ ಆ ಮಾಪಿಳ್ಳೆತೋಡಿನಿಂದ ತೊರೆಯೊಂದು ಹುಟ್ಟುತ್ತದೆ. ಹರಿಯುತ್ತ ಹರಿಯುತ್ತಾ ವಿಶಾಲವಾಗುತ್ತಾ ಲಕ್ಷ್ಮಣತೀರ್ಥವನ್ನು ಸೇರುತ್ತದೆ. ಲಕ್ಷ್ಮಣತೀರ್ಥ ಕಾವೇರಿಯನ್ನು ಸೇರಿ,ಕಾವೇರಿ ಬಂಗಾಳಕೊಲ್ಲಿಯನ್ನು ಸೇರಿ ಲೋಕಪಾವನೆಯೆಂಬ ಹೆಸರನ್ನು ಅನ್ವರ್ಥಮಾಡುತ್ತದೆ.ಹಾಗಾಗಿ ಮಾಪಿಳ್ಳೆತೋಡಿನ ಈ ಸಣ್ಣ ತೊರೆಯಾಗಿ ಮುಂದೆ ವಿಶಾಲವಾಗುವ ಅಚ್ಚರಿ ಸದಾ ಕುತೂಹಲವನ್ನುಂಟುಮಾಡುತ್ತದೆ.ಏನೋ ನಿಗೂಢತೆಯನ್ನು ಜಲಮೂಲ ಹೊತ್ತುಕೊಂಡಿವೆಯಲ್ಲಾ ಎಂದೂ ಅನಿಸುತ್ತದೆ.
ಆ ತೊರೆಯಷ್ಟೇ ನಿಗೂಢವಾದ ಮತ್ತೊಂದು ಸಂಗತಿಯೂ ಆ ಮಾಪಿಳ್ಳೆತೋಡಿನಲ್ಲಿದೆ.ಅದು ಕೇವಲ ೩೦ ಮನೆಗಳಿರುವ ಸಣ್ಣ ಊರು ಅಥವಾ ಕೇರಿ.ಅವರ ನಿಗೂಢತೆಗೆ ಕಾರಣವೇನೆಂದರೆ ಅವರೆಲ್ಲರೂ ಕೊಡವ ಮಾಪಿಳ್ಳೆಗಳು. ಕೊಡವರಲ್ಲದ ಕೊಡವರು. ಅಲ್ಲಿನ ತೋಡು,ಭೃಹತ್ತಾದ ಮಸೀದಿಗಳ ಹೊರತಾಗಿಯೂ ಮಾಪಿಳ್ಳೆತೋಡು ಮತ್ತೆನನ್ನೋ ಬಚ್ಚಿಟ್ಟುಕೊಂಡಿದೆಯೆಂದೇ ಅನಿಸುತ್ತದೆ.ಅದಕ್ಕೆ ಇತಿಹಾಸದ ಭಾರ ಎಂದುಕೊಂಡರೂ ಸತ್ಯದ ಮೇಲಿನ ಪೊರೆ ಎಂದುಕೊಂಡರೂ ಬೇರ್ಪಡುತ್ತಿರುವ ತೀವ್ರತೆ ಎಂದುಕೊಂಡರೂ ಎಲ್ಲವೂ ಸರಿಯೇ.
ಅಂಥ ಮಾಪಿಳ್ಳೆತೋಡಿನಲ್ಲಿ ಕಲ್ಲಾಯಿ ಮಸೀದಿ ಹೆಸರಿನ ದೊಡ್ಡ ಮಸೀದಿಯೆದುರು ಸಿಕ್ಕಿದವರು ಆಲೀರ ಸಾದಲಿಯವರು.೫೦ ದಾಟಿದೆ ಎನ್ನಬಹುದಾದ ಶರೀರ.ವಿದ್ಯಾವಂತನ ಚೆಹರೆ.ಒಟ್ಟಾರೆ ಕಾಳಜಿಪರ ಮನುಷ್ಯ. ಕಣ್ಣು, ಮೂಗು, ಭುಜ, ಹಣೆಗಳನ್ನು ನೋಡುವಾಗಲೇ ಇಲ್ಲಿ ಏನೋ ತಪ್ಪಿದೆ ಎನಿಸುವ ಮುಖಲಕ್ಷಣದ ಸಾದಲಿಯವರನ್ನು ನೋಡಿದರೆ ಎರಡೂವರೆ ಶತಮಾನಗಳ ಇತಿಹಾಸಗಳು ಕಣ್ಣಮುಂದೆ ಸುಳಿಯದಿರದು. ಆದರೆ ಸಾದಲಿಯವರ ಮಾತುಗಳು ಮಾತ್ರ ಇತಿಹಾಸವನ್ನು ಮತ್ತಷ್ಟು ಮುಚ್ಚಿಬಿಡುತ್ತವೆ. "ಇದೇನಿದು ಸಾದಲಿಯವರೇ ನಿಮಗೆ ಕೊಡವರಂತೆ ಮನೆಹೆಸರುಗಳು? ನಿಮ್ಮ ಪೂರ್ವಪರವೇನು? ವಂಶವೃಕ್ಷವೇನು?" ಎಂದು ಅವರನ್ನು ಕೇಳಿದರೆ ಅವರ ಕಥೆಗಳು ಮಾಪಿಳ್ಳೆತೋಡಿನ ತೊರೆಯಂತೆ ಎಲ್ಲೆಲ್ಲಿಗೋ ಹರಿಯುತ್ತದೆ.ಅವರು ಹೇಳುವ ಕಥೆಗಳು ಕೇರಳಕ್ಕೆ ಮುಟ್ಟಿ. ಅನಂತರ ಅರಬ್ ಗೆ ಸಾಗಿ ಹೊಸದೊಂದು ಇತಿಹಾಸ ಕ್ಷಣಮಾತ್ರದಲ್ಲಿ ಸೃಷ್ಟಿಯಾಗುತ್ತದೆ.
ಸುಮಾರು ೪೦೦ ವರ್ಷಗಳ ಹಿಂದೆ ಕಲ್ಲಾಯಿ ಎಂಬ ಕೇರಳದ ಊರಿನಿಂದ ಯಾತ್ರಿಕರ ತಂಡವೊಂದು ಈ ಮಾರ್ಗದಲ್ಲಿ ಬಂದಿತ್ತಂತೆ. ಮಾಪಿಳ್ಳೆತೋಡಿನ ಜಾಗವನ್ನು ನೋಡಿ ಎಷ್ಟೊಂದು ಸುಂದರ ಎಂದು ಖುಷಿ ಪಟ್ಟರಂತೆ. ಒಂದು ಒಣಕಡ್ಡಿಯನ್ನು ನೆಲದಲ್ಲಿ ಚುಚ್ಚಿ ಹೊರಟುಹೋದರಂತೆ. ಯಾತ್ರೆ ಮುಗಿಸಿ ಮರಳುವಾಗ ಆ ಕಡ್ಡಿ ಚಿಗುರಿತ್ತಂತೆ. ಆ ಯಾತ್ರಿಕರು ಅಲ್ಲೊಂದು ಮಸೀದಿಯನ್ನು ಕಟ್ಟಿದರಂತೆ. ಅದೇ ಈ ಕಲ್ಲಾಯಿ ಮಸೀದಿ ಎಂದು ಸಾದಲಿಯವರು ತೋರಿಸಿದರು. ಮಾಪಿಳ್ಳೆತೋಡಿನ ಮಾಪಿಳ್ಳೆಗಳ ಬಗ್ಗೆ ಮತ್ತೊಂದು ವಾದವೂ ಉಂಟಂತೆ. ಇವರ ಪೂರ್ವಜರು ಕೇರಳದಿಂದ ವ್ಯಾಪಾರ ಮಾಡುತ್ತ ಬಂದರಂತೆ ಆಥವಾ ಮಂಗಳೂರಿನ ಮೂಲಕ ವ್ಯಾಪಾರಕ್ಕಾಗಿ ಬಂದವರಂತೆ. ಆದರೆ ಈ ಎಲ್ಲಾ ವಾದಗಳಿಗೆ ಆಧಾರಗಳೇನಿಲ್ಲ. ಒಟ್ಟಾರೆ ಮಾಪಿಳ್ಳೆ ತೋಡಿನ ಮುಸಲ್ಮಾನರು ಒಂದಾನೊಂದು ಕಾಲದ ಹಿಂದುಗಳಾಗಿದ್ದ ಕೊಡವರಂತೂ ಅಲ್ಲವೇ ಅಲ್ಲ ಎಂದು ಬಿಂಬಿಸಲು ತುಂಬಾ ಪ್ರಾಯಾಸಪಟ್ಟಂತೆ ಸಾದಲಿಯವರು ಹೇಳುತ್ತಲೇ ಇದ್ದರು.ಇದು ಒಬ್ಬ ಸಾದಲಿಯವರ ವಾದವಲ್ಲ ಇತ್ತೀಚಿನ ಕೆಲ ವರ್ಷಗಳಿಂದ ಕೊಡಗಿನ ಸಮಸ್ತ ಕೊಡವ ಮಾಪಿಳ್ಳೆಗಳೆಲ್ಲರ ವಾದವೆಲ್ಲವೂ "ತಾವು ಟಿಪ್ಪು ಕಾಲದಲ್ಲಿ ಮತಾಂತರಗೊಂಡ ಕೊಡವರಲ್ಲ" ಎಂದೇ.ಈ ಮಾಪಿಳ್ಳೆತೋಡು ಗ್ರಾಮದಲ್ಲಿ ಇಂದು ಸುಮಾರು ೨೦೦ರಷ್ಟು ಸಂಖ್ಯೆಯಲ್ಲಿ ಆಲೀರ(ಆಲಿಯವರ) ಹೆಸರಿನ ಮನೆತನದ ಸದಸ್ಯರಿದ್ದಾರೆ. ಅವರೆಲ್ಲರೂ ಆಸ್ತಿವಂತ ಪ್ಲಾಂಟರುಗಳು. ಕೊಡವ ಜಮ್ಮಾ ಹಕ್ಕನ್ನು (ವಂಶಪಾರಂಪರ‍್ಯದ ಆಸ್ತಿ ಮತ್ತು ಆಯುಧದ ಹಕ್ಕು, ತೆರಿಗೆ ವಿನಾಯಿತಿಯ ಹಕ್ಕು, ವಿಶೇಷ ಭೂ ಒಡೆತನದ ಹಕ್ಕು.ತಮ್ಮ ಶೌರ್ಯಕ್ಕೆ ಪ್ರತಿಯಾಗಿ ಕೊಡಗಿನ ಮೂಲನಿವಾಸಿಗಳಿಗೆ ಅರಸರು ಮತ್ತು ಬ್ರಿಟಿಷ್ ಆಡಳಿತ ಕೊಡಮಾಡಿದ ವಿಶೇಷ ಹಕ್ಕು)ಹೊಂದಿರುವ ಇವರ ಮನೆಹೆಸರಿನ ಹಿಂದೆ ಇವರೇ ಹೆಣೆದ ಒಂದು ಕಥೆಯನ್ನೂ ಹೇಳುತ್ತಾರೆ:ಕೊಡಗಿನ ರಾಜನ ಆಸ್ಥಾನದಲ್ಲಿ ಆಲಿ ಎಂಬ ಕಾರ್ಯಕಾರನಿದ್ದನಂತೆ. ಉತ್ತಮ ಆಡಳಿತ ತಜ್ಞನಾದ ಈತ ನಿವೃತ್ತಿಯಾದ ಅನಂತರ "ಪೆನ್ಷನ್ದಾರ ಆಲಿ" ಎಂದೇ ಆತ ಖ್ಯಾತನಾದನಂತೆ. ಮುಂದೆ ಜನ ಆತನ ವಂಶದವರನ್ನು ಆಲೀರಎಂದೇ ಕರೆಯಲಾರಂಬಿಸಿದರಂತೆ. ಇಷ್ಟು ಹೇಳುವಾಗ ಟಿಪ್ಪುವಿನ ಇತಿಹಾಸ ಹತ್ತಿದಲ್ಲೆಲ್ಲೂ ಸುಳಿಯುವುದಿಲ್ಲ. ಈ ವಾದವೆಷ್ಟು ಹುಸಿಯೆಂದರೆ ಕೊಡವ ಮಾಪಿಳ್ಳೆಗಳಲ್ಲಿ ಆಲೀರ ಅಲ್ಲದೆ ಇನ್ನಿತರ ಹತ್ತರಿಂದ ಹನ್ನೆರಡರಷ್ಟು ಮನೆಹೆಸರಿನ ಕುಟುಂಬಳಿವೆ.ಹಲವು ಕುಟುಂಬಗಳ ಹೆಸರುಗಳು ಈಗಲೂ ಇರುವ ಕೊಡವ ಕುಟುಂಬಗಳ ಹೆಸರುಗಳೇ. ಕೊಡಗಿನ ಇತಿಹಾಸವನ್ನು ತಡಕಾಡಿದರೆ ಸಿಗುವ ಅಳಿದುಹೋದ ಕೆಲವು ಕೊಡವ ಮನೆತನಗಳು ಈಗಲೂ ಕೊಡವ ಮಾಪಿಳ್ಳೆಗಳಲ್ಲಿ ಬಳಕೆಯಲ್ಲಿರುವುದು ಗೋಚರವಾಗುತ್ತವೆ. ಆಲೀರ ಮನೆತನವೇನೋ ಕೇರಳ ಮತ್ತು ಮಂಗಳೂರಿನ ಜಾಡನ್ನು ಹಿಡಿದು ಕಥೆ ಕಟ್ಟಬಹುದು ಆದರೆ ಇನ್ನಿತರ ಕುಟುಂಬಗಳ ಮನೆಹೆಸರುಗಳಾವುವೂ ಮುಸಲ್ಮಾನ ಹೆಸರುಗಳಲ್ಲ. ಅವು ಅಪ್ಪಟ ಕೊಡವ ಶಬ್ದಗಳು ಎಂಬುದು ಇತಿಹಾಸದ ನಿಚ್ಚಳತೆಗೆ ಸಾಕ್ಷಿಗಳು. ಆಲೀರ ಸಾದಲಿಯವರು ಹೇಳುವ ಕಥೆಗಳನ್ನು ಇಷ್ಟು ಕೇಳುವಾಗಲೇ ಸಂಶಯಗಳು ಹುಟ್ಟಲು ಆರಂಭವಾಗುತ್ತದೆ. ಏಕೆಂದರೆ ಕೇರಳದ ಕಲ್ಲಾಯಿಯಿಂದ ಬಂದ ಯಾತ್ರಿಕರು ಹೊರಟಿದ್ದದರೂ ಎಲ್ಲಿಗೆ? ಯಕಶ್ಚಿತ್ ಯಾತ್ರಿಕರು ಒಣಕಡ್ಡಿಯ ಮೇಲೆ ಭರವಸೆಯಿಡಲು ಕಾರಣವೇನು? ಮಂಗಳೂರಿನಿಂದ ವ್ಯಾಪಾರಾರ್ಥವಾಗಿ ಬಂದವರಾಗಿದ್ದರೆ ಮಂಗಳೂರಿನ ಮುಸಲ್ಮಾನರೇಕೆ ಬ್ಯಾರಿಗಳು? ಇವರೇಕೆ ಕೊಡವ ಮಾಪಿಳ್ಳೆಗಳು? ಇವರಿಗೇಕೆ ಕೊಡವರಂತೆ ಐನ್ ಮನೆಗಳಿವೆ? ಅಲ್ಲಿ ಕೊಡವ ಮನೆಗಳಿಗಿರುವಂತೆ ಪೂಜನೀಯ ಹಿನ್ನಲೆಯ ಕನ್ನಿಕಂಭಗಳು,ಐಮರಗಳು ಇದೆ? ಅಲ್ಲದೆ ಸಾದಲಿಯವರು ಹೇಳುವ ಪೆನ್ಷನ್ದಾರ ಆಲಿ ಯ ಕಥೆ ಏಕೆ ಕೊಡಗಿನ ಇತಿಹಾಸದಲ್ಲೇ ಕಾಣುವುದಿಲ್ಲ? ಇತಿಹಾಸವನ್ನು ಮತ್ತಷ್ಟು ತಡಕಾಡಿದರೆ ಒಂದು ವ್ಯವಸ್ಥಿತ ಸತ್ಯದ ಅಪಭ್ರಂಶದ ಚಿನ್ಹೆಗಳು ಕಾಣುತ್ತವೆ. ಅಬ್ಬ್ಬಾಸ್ ಆಲಿ ಎಂಬ ಮುಸಲ್ಮಾನನೊಬ್ಬ ಕೆಲಕಾಲ ಕೊಡಗು ಅರಸರ ಆಸ್ಥಾನದಲ್ಲಿ ಕಾರ್ಯಕಾರನಾಗಿದ್ದ. ಈತನ ಬಗ್ಗೆ ಹೆಚ್ಚಿನ ವಿವರಗಳು ಸಿಗದಿದ್ದರೂ ಈತನೂ ಟಿಪ್ಪುವಿನ ಕ್ರೌರ್ಯಕ್ಕೆ ಬಲಿಯಾಗಿ ಮತಾಂತರವಾದವನು ಎಂಬ ಉಲ್ಲೇಖವೊಂದನ್ನು ಬ್ರಿಟಿಷ್ ಇತಿಹಾಸಕಾರರು ಮಾಡುತ್ತಾರೆ. ಈತನ ಸೇವೆಯನ್ನು ಪರಿಗಣಿಸಿ ಅರಸರು ಈಗಿನ ಚೇನಿವಾಡ ಗ್ರಾಮದಲ್ಲಿ ೪೫ ಏಕರೆ ಭತ್ತದ ಗದ್ದೆಯನ್ನೂ ಅದಕ್ಕೆ ಸಂಬಂಧಿಸಿದ ಭೂಮಿಯನ್ನೂ ಜಮ್ಮಾವಾಗಿ ಉಡುಗೋರೆ ನೀಡಿರಬಹುದು ಎಂದು ಹಲವರು ಸಂಶಯ ವ್ಯಕ್ತಪಡಿಸುತ್ತಾರೆ. ಇಂಥ ನಿಚ್ಚಳ ಇತಿಹಾಸವಿದ್ದರೂ ಇಂದು ಕೊಡವ ಮಾಪಿಳ್ಳೆಗಳು ಹ್ಯಾರಿಪಾಟರ್ ನಂತಹ ಕಥೆಗಳನ್ನು ಹೇಳುತ್ತಾರೆ.ಮಾರ್ಕ್ಸ ವಿಲ್ಕ್ಸ್ ಬರೆದ ಹಿಸ್ಟ್ರಿ ಆಫ್ ಮೈಸೂರ್ ನಲ್ಲಿ ಕೂಡ ಕೊಡವ ಮಾಪಿಳ್ಳೆಗಳ ಬಗ್ಗೆ ಉಲ್ಲೇಖಗಳಿವೆ. "೧೭೮೪ರ ಅಕ್ಟೋಬರ್ ನಲ್ಲಿ ಕೊಡಗಿನ ಮೇಲೆ ಧಾಳಿ ನಡೆಸಿದ ಟಿಪ್ಪು ಬೆಂಕಿಯಿಡುತ್ತಾ ಸಾಗಿ ಅಲ್ಪ ಜನಸಂಖ್ಯೆಯ ಕೊಡವರನ್ನು ಮತಾಂತರಿಸಿದ" ಎಂದು ವಿಲ್ಕ್ಸ್ ಬರೆಯುತ್ತಾನೆ. "ಹೀಗೆ ಮತಾಂತರವಾದವರು ಇಂದು ಕೊಡವ ಮಾಪಿಳ್ಳೆಗಳೆಂದು ಕರೆಸಿಕೊಳ್ಳುತ್ತಿದ್ದಾರೆ" ಎಂದು ಹೇಳುವುದಕ್ಕೂ ವಿಲ್ಕ್ಸ್ ಮರೆಯುವುದಿಲ್ಲ.
ಆದರೆ ಪಾನ್ ಇಸ್ಲಾಮೆನ್ನುವುದು ಅದನ್ನೆಲ್ಲ ಉಲ್ಲೇಖಿಸುವುದಿಲ್ಲ.ಉಲ್ಲೇಖಿಸದಿರುವುದು ಮಾತ್ರವಲ್ಲ ಅಂಥದ್ದನ್ನು ವಿರೋಧಿಸಬೇಕೆನ್ನುವುದು ಅದರ ನಿಲುವು. ಮುಸ್ಲಿಂ ಬ್ರದರ್ ಹುಡ್ ಎಂಬುದು ಮಾಪಿಳ್ಳೆತೋಡಿಗೂ ಕಾಲಿಟ್ಟಮೇಲೆ ಇನ್ನು ಪರಂಪರೆಯನ್ನು ಅವರು ಧಿಕ್ಕರಿಸದಿರುವರೇ? ಹಾಗಾಗಿ ಇಂದು ಮಾಪಿಳ್ಳೆತೋಡು ಮಾತ್ರವಲ್ಲ ಕೊಡವಮಾಪಿಳ್ಳೆಗಳೆಲ್ಲರೂ ಪಿಳ್ಳೆ ನೆಪವನ್ನೊಡ್ಡಿ ಅರಬ್ ರಾಷ್ಟ್ರವಾದದ ಹಿಂದೋಡುತ್ತಿದ್ದಾರೆ. ಆದರೆ ಸತ್ಯಕ್ಕೆ ಸಾವಿಲ್ಲ,ನಿದರ್ಶನಗಳು ಸುಳ್ಳು ಹೇಳುವುದಿಲ್ಲ.ಟಿಪ್ಪುವಿನ ಕಾಲಾವಧಿ ಹೆಚ್ಚಂತೂ ಅಲ್ಲ. ಹಾಗಾಗಿ ಕಟ್ಟುಕಥೆಗಳ ನಡುವೆಯೂ ಸತ್ಯ ಗೋಚರವಾಗುತ್ತವೆ. ಈಗ್ಗೆ ಐದಾರು ವರ್ಷಗಳ ಹಿಂದಿನ ವರೆಗೂ ಕೊಡವ ಮಾಪಿಳ್ಳೆಗಳು ಕೊಡವರಂತೆ ಹುತ್ತರಿ ಆಚರಿಸುತ್ತಿದ್ದದು, ಕಾವೇರಿ ತೀರ್ಥೋದ್ಭವವನ್ನು ಆಚರಣೆ ಮಾಡುತಿದ್ದದು, ಪಂಚಾಂಗ ನೋಡಿ ಹೊಸಕ್ಕಿ ಊಟ ಮಾಡುತ್ತಿದ್ದದು ಗೊತ್ತಿರದ ಸಂಗತಿಯೇನಲ್ಲ. ಮಾಪಿಳ್ಳೆ ಹೆಂಗಳೆಯರು ಕೊಡವತಿಯರಂತೆ ಆಭರಣ ಧರಿಸುತ್ತಿದ್ದದನ್ನು ಮರೆತುಹೋದವರು ಇಂದಿಲ್ಲ. ಮಾಪಿಳ್ಳೆಗಳ ಮನೆಯ ಅಟ್ಟದಲ್ಲಿ ದುಡಿಗಳು , ಕತ್ತಿಗಳು ಇರುವುದನ್ನು ಇಂದೂ ಕೆಲವರು ತೋರಿಸುತ್ತಾರೆ. ಸಾದಲಿಯವರೂ ತೋರಿಸಿದರು. ಆದರೆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಹಿಂಜರಿಯುತ್ತಾರೆ. ಇದಕ್ಕೆಲ್ಲಾ ಯಾವ ಮೋಹನ ಮುರಳಿ ಕರೆಯಿತೋ ಎಂದು ಸಂಶಯ ಪಡುವಂತಿಲ್ಲ. ಏಕೆಂದರೆ ಜಗತ್ತಿನಾದ್ಯಂತ ತಾನೊಂದೇ ಸತ್ಯಂ ಎಂದು ಭಯಂಕರವಾಗಿ ಮುನ್ನುಗ್ಗಲು ಹಾತೊರೆಯುತ್ತಿರುವುದು,ತನ್ನದಲ್ಲದರ ಅಸಹನೆ ಹೊಂದಿರುವುದರ ಬಗ್ಗೆ ಸಂಶಯಗಳು ಇಲ್ಲವಲ್ಲ.

No comments: